ಪದ್ಯ ೫: ಧರ್ಮಜನು ಕೃಷ್ಣನಲ್ಲಿ ಏನು ಬೇಡಿದನು?

ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ (ಗದಾ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಶ್ರೀಕೃಷ್ಣನಿಗೆ, ದೇವ ಕೌರವನು ಜಲಸ್ತಂಭ ವಿದ್ಯೆಯನ್ನವಲಂಭಿಸಿ ಮಾಯೆಯಿಂದ ನೀರಿನಲ್ಲಿ ಮುಳುಗಿ ಅಲ್ಲಿಯೇ ಇದ್ದಾನೆ. ಈಗ ಯುದ್ಧದ ವ್ಯವಹಾರವನ್ನು ಹೇಗೆ ಮುಂದುವರಿಸೋಣ, ಅಪ್ಪಣೆಕೊಡು ಎಂದು ಬೇಡಿದನು.

ಅರ್ಥ:
ದೇವ: ಭಗವಂತ; ಕಂಡು: ನೋಡು; ಮಾಯ: ಗಾರುಡಿ, ಇಂದ್ರಜಾಲ; ವಿಡಂಬ: ಅನುಸರಣೆ; ವಿದ್ಯೆ: ಜ್ಞಾನ; ನಿಷ್ಠೀವನ: ಹೊರಚೆಲ್ಲುವಿಕೆ; ಆವಿರ್ಭೂತ: ಹುಟ್ಟಿದ; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ; ಡಂಬರ: ಆಡಂಬರ, ಜಂಭ; ವಿಧಿ: ನಿಯಮ; ಸಮರ: ಯುದ್ಧ; ವ್ಯಾವಹಾರ: ಕೆಲಸ, ಉದ್ಯೋಗ; ವಿಷಯ: ವಿಚಾರ, ಸಂಗತಿ; ಬೆಸಸು: ಹೇಳು, ಆಜ್ಞಾಪಿಸು; ಅರಸು: ರಾಜ; ಸುತ: ಮಗ;

ಪದವಿಂಗಡಣೆ:
ದೇವ +ಕಂಡಿರೆ +ಕುರುಪತಿಯ +ಮಾ
ಯಾ+ವಿಡಂಬನ+ವಿದ್ಯೆಯನು +ನಿ
ಷ್ಠೀವನ+ಆವಿರ್ಭೂತ +ಸಲಿಲ+ಸ್ತಂಭ +ಡಂಬರವ
ಆವುದಿಲ್ಲಿಯ +ವಿಧಿಯ +ಸಮರ
ವ್ಯಾವಹಾರಿಕ +ವಿಷಯ+ ತಪ್ಪದೆ
ನೀವು +ಬೆಸಸುವುದ್+ಎಂದನ್+ಅರಸನು +ದೇವಕೀ+ಸುತನ

ಅಚ್ಚರಿ:
(೧) ದೇವ, ದೇವಕೀಸುತ – ಕೃಷ್ಣನನ್ನು ಕರೆದ ಪರಿ