ಪದ್ಯ ೨೯: ಕೃಷ್ಣನ ಬೀಳ್ಕೊಡುಗೆ ಹೇಗಿತ್ತು?

ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ
ಅರಿದಿಹುದು ನೀವೆಂದು ರಾಯನಿ
ಗರುಹಿ ಭೀಮಾದಿಗಳಿಗುಚಿತವ
ನೆರೆನುಡಿದು ದ್ರೌಪದಿಯ ಮನ್ನಿಸಿ ಮರಳಿದನು ಪುರಕೆ (ಅರಣ್ಯ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಪಾಂಡವರಿಗೆ ಹಿತವಚನವನ್ನು ಹೇಳುತ್ತಾ, ಬರಲಿರುವ ಕಾಲದಲ್ಲಿ ಅತಿಶಯವಾದ ಎಚ್ಚರದಿಂದಿರಬೇಕು, ಅಗತ್ಯಬಿದ್ದರೆ ನಮಗೆ ತಿಳಿಸಿ ಏನು ಮಾಡಬೇಕೆಂದು ನಿಶ್ಚಯಿಸಿರಿ, ಇದನ್ನು ನೀವು ಸದಾ ನೆನಪಿನಲ್ಲಿಡಬೇಕು, ಎಂದು ಶ್ರೀಕೃಷ್ಣನು ಧರ್ಮಜನಿಗೆ ತಿಳಿಸಿ, ಭೀಮಾದಿಗಳಿಗೆ ಉಚಿತವಾದ ಮಾತುಗಳನ್ನಾಡಿ, ದ್ರೌಪದಿಯನ್ನು ಅನುಗ್ರಹಿಸಿ ದ್ವಾರಕೆಗೆ ತೆರಳಿದನು.

ಅರ್ಥ:
ಮರೆ: ನೆನಪಿನಿಂದ ದೂರವಾಗು; ಕಾಲ: ಸಮಯ; ಬಲಿದು: ಗಟ್ಟಿಯಾಗು; ಎಚ್ಚರ: ಹುಷಾರು, ಜೋಪಾನ; ಇಹುದು: ಇರುವುದು; ಎಚ್ಚರಿಸು: ಮೇಲೇಳು; ಕಾರ್ಯ: ಕೆಲಸ; ಸ್ಥಿತಿ: ಹದ, ಅವಸ್ಥೆ; ನಿಶ್ಚೈಸು: ನಿರ್ಧರಿಸು; ಅರಿ: ತಿಳಿ; ರಾಯ: ರಾಜ; ಅರುಹು: ಹೇಳು; ಆದಿ: ಮುಂತಾದ; ಉಚಿತ: ಸರಿಯಾದ; ಎರೆ: ಸುರಿ; ನುಡಿ: ವಚನ, ಮಾತು; ಮನ್ನಿಸು: ಅನುಗ್ರಹಿಸು; ಮರಳು: ಹಿಂದಿರುಗು; ಪುರ: ಊರು;

ಪದವಿಂಗಡಣೆ:
ಮರೆಯಲಿಹ +ಕಾಲದಲಿ +ಬಲಿದ್
ಎಚ್ಚರದ್+ಇಹುದು +ಬೇಕಾದರ್+ಎಮಗ್
ಎಚ್ಚರಿಸಿ +ಕಾರ್ಯ+ಸ್ಥಿತಿಯ +ನಿಶ್ಚೈಸುವುದು +ನಮ್ಮೊಳಗೆ
ಅರಿದಿಹುದು+ ನೀವೆಂದು +ರಾಯನಿಗ್
ಅರುಹಿ +ಭೀಮಾದಿಗಳಿಗ್+ಉಚಿತವ
ನೆರೆನುಡಿದು +ದ್ರೌಪದಿಯ +ಮನ್ನಿಸಿ +ಮರಳಿದನು +ಪುರಕೆ

ಅಚ್ಚರಿ:
(೧) ಕೃಷ್ಣನ ಸ್ವಯಂ ಸ್ನೇಹದ ಹಸ್ತವನ್ನು ನೀಡುವ ಪರಿ – ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ