ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು (ವಿರಾಟ ಪರ್ವ, ೨ ಸಂಧಿ, ೨೯ ಪದ್ಯ)
ತಾತ್ಪರ್ಯ:
ಎಲೈ ಮೂರ್ಖ, ನಾನು ಗಂಧರ್ವರ ಹೆಂಡತಿ, ನಿನ್ನ ದುಷ್ಟತನವನ್ನು ನನ್ನ ಪತಿಯರು ಸೈರಿಸುವುದಿಲ್ಲ. ಅವರು ಮಹಾ ಪರಾಕ್ರಮಿಗಳು. ಆದುದರಿಂದ ಈ ಹುಚ್ಚನ್ನು ಬಿಟ್ಟು ಬಿಡು. ಅಪಕೀರ್ತಿ ನಾರಿಯನ್ನು ಸೇರಬೇಡ. ನಿನ್ನ ಮನೆಗೆ ತೆರಳುವುದೇ ಒಳಿತು ಎಂದು ದ್ರೌಪದಿಯು ಒಂದು ಹುಲ್ಲುಕಡ್ದಿಯನ್ನು ಹಿಡಿದು ಹೇಳಿದಳು.
ಅರ್ಥ:
ಮರುಳು: ಮೂಢ; ಬೇಡ: ತೊರೆ; ಗಂಧರ್ವ: ಖಚರ; ಹೆಂಡತಿ: ಸತಿ, ಭಾರ್ಯ; ದುರುಳ: ದುಷ್ಟ; ಸೈರಿಸು: ತಾಳು, ಸಹನೆ; ಬಲ್ಲ: ತಿಳಿದ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹು; ಅಪಕೀರ್ತಿ: ಅಪಯಶಸ್ಸು; ನೆರೆ: ಜೊತೆಗೂಡು; ನಿಳಯ: ಮನೆ; ಮರಳು: ಹಿಂದಿರುಗು; ಲೇಸು: ಒಳಿತು; ತೃಣ: ಹುಲ್ಲು; ಹಿಡಿ: ಗ್ರಹಿಸು; ಸಾರು: ಪ್ರಕಟಿಸು;
ಪದವಿಂಗಡಣೆ:
ಮರುಳುತನ +ಬೇಡ್+ಎಲವೊ +ಗಂಧ
ರ್ವರಿಗೆ+ ಹೆಂಡತಿ+ ತಾನು +ನಿನ್ನಯ
ದುರುಳತನವನು+ ಸೈರಿಸರು +ತನ್ನವರು +ಬಲ್ಲಿದರು
ಸೊರಹದಿರು +ಅಪಕೀರ್ತಿ+ನಾರಿಯ
ನೆರೆಯದಿರು+ ನೀ +ನಿನ್ನ +ನಿಳಯಕೆ
ಮರಳುವುದು +ಲೇಸೆಂದು +ತೃಣವನು+ ಹಿಡಿದು +ಸಾರಿದಳು
ಅಚ್ಚರಿ:
(೧) ನ ಕಾರದ ಸಾಲು ಪದ – ನಾರಿಯ ನೆರೆಯದಿರು ನೀ ನಿನ್ನ ನಿಳಯಕೆ
(೨) ಮರುಳು, ಮರಳು – ಪದಗಳ ಬಳಕೆ