ಪದ್ಯ ೩೫: ಯಾರು ಯಾರ ಹಿಂದೆ ನಿಂತರು?

ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ (ದ್ರೋಣ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಮುಂದೆ ನುಗ್ಗಿದ ವೀರರು ಹಿಂದೆ ಬರುತ್ತಿದ್ದವರ ಮರೆಹೊಕ್ಕರು. ಅವರು ಹಿಂದಿದ್ದವರ ಹಿಂದೆ ಹೋಗಿ ಮುಂದಿರುವವರಿಂದ ನಾವು ಉಳಿಯಬಹುದೆಂದು ಹಾರೈಸಿದರು. ಹೀಗೆ ಒಬ್ಬರ ಹಿಂದೊಬ್ಬರು ಹೊಕ್ಕು ಇಡೀ ಸೇನೆಯೇ ಅರ್ಜುನನ ಹಿಂದೆ ನಿಂತಿತು. ಅರ್ಜುನನು ಕೃಷ್ಣನ ಬಲದಿಂದೆ ನಿಂತನು. ಕಪಟವನ್ನು ಬಿಟ್ಟು ಕಾದಿದರೆ, ನಿನ್ನವರು ಯಾವಾಗ ಬೇಕಿದ್ದರು ಗೆಲ್ಲದಿರುವರೇ? ಎಂದು ಸಂಜಯನು ವಿವರಿಸಿದನು.

ಅರ್ಥ:
ಮುಂದೆ: ಎದುರು; ಹೊಗು: ತೆರಳು; ಅತಿಬಳರು: ಪರಾಕ್ರಮಿ; ಹಾರು: ಲಂಘಿಸು; ಹಿಂದಣ: ಹಿಂಭಾಗ; ನಿಲು: ನಿಲ್ಲು; ಮುಂದಣ: ಮುಂದೆ; ಆಸೆ: ಇಚ್ಛೆ; ನಿಂದು: ನಿಲ್ಲು; ಪರಿ: ತೀರಿ; ಬಲ: ಶಕ್ತಿ; ಗಾಹುಗತ: ಮೋಸ, ಭ್ರಾಂತಿ; ಉಳಿದು: ಮಿಕ್ಕ; ಕಾದು: ಹೋರಾಡು;

ಪದವಿಂಗಡಣೆ:
ಮುಂದೆ+ ಹೊಗುವ್+ಅತಿಬಳರು+ ಹಾರಿತು
ಹಿಂದಣವರನು+ ಹಿಂದೆ+ ನಿಲುವರು
ಮುಂದಣವರ್+ಆಸೆಯಲಿ +ನಿಂದುದು +ಪಾರ್ಥ+ಪರಿಯಂತ
ಅಂದು +ಪಾರ್ಥನು +ಕೃಷ್ಣ+ಬಲದಲಿ
ನಿಂದನೇವೇಳುವೆನು +ನಿನ್ನವ
ರೆಂದು +ಗೆಲ್ಲರು+ ಗಾಹುಗತಕವನ್+ಉಳಿದು +ಕಾದುವರೆ

ಅಚ್ಚರಿ:
(೧) ಮುಂದೆ, ಹಿಂದಣ – ವಿರುದ್ಧ ಪದಗಳು
(೨) ಪಾರ್ಥನು ಯಾರ ಹಿಂದೆ ನಿಂತನು – ಪಾರ್ಥನು ಕೃಷ್ಣಬಲದಲಿ ನಿಂದನ್