ಪದ್ಯ ೬೧: ಯುಧಿಷ್ಠಿರನೇಕೆ ಸಂತಸಗೊಂಡನು?

ಲೇಸುಮಾಡಿದೆ ನಾಕವನು ಖಳ
ರೀಸುದಿವಸ ವಿಭಾಡಿಸಿದರೆ ಸು
ರೇಶನಾಪತ್ತಿಂಗೆ ನಿರ್ವ್ವಾಪಣವ ರಚಿಸಿದೆಲ
ಈಸು ಪುಣ್ಯೋದಯಕೆ ಪೂರ್ವಮ
ಹೀಶಕುಲ ನೋಂತುದೆಯೆನುತ ಸಂ
ತೋಷಮಯ ಜಲಧಿಯಲಿ ಕೀಳಮೇಲಾದನವನೀಶ (ಅರಣ್ಯ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಅರ್ಜುನನ ಮಾತುಗಳನ್ನು ಕೇಳಿ ಯುಧಿಷ್ಠಿರನು ಸಂತೋಷಗೊಂಡು, ಇಷ್ಟು ದಿನವೂ ಸ್ವರ್ಗಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದ ರಾಕ್ಷಸರನ್ನು ನಾಶ ಮಾಡಿ, ದೇವೇಂದ್ರನ ಆಪತ್ತನ್ನು ಹೋಗಲಾಡಿಸಿದುದು ಒಳ್ಳೆಯದಾಯಿತು. ನಮ್ಮ ವಂಶದ ಪೂರ್ವಜರು ಮಾಡಿದ ವ್ರತದಿಂದ ಈ ಕೆಲಸವಾಯಿತು ಎಂದು ಹೇಳಿ ಸಂತೋಷ ಸಾಗರದಲ್ಲಿ ಮುಳುಗೆದ್ದನು.

ಅರ್ಥ:
ಲೇಸು: ಒಳಿತು; ನಾಕ: ಸ್ವರ್ಗ; ಖಳ: ದುಷ್ಟ; ಈಸು: ಇಷ್ಟು; ದಿವಸ: ದಿನ; ವಿಭಾಡ: ನಾಶಮಾಡುವವನು; ಸುರೇಶ: ಇಂದ್ರ; ಆಪತ್ತು: ತೊಂದರೆ; ನಿರ್ವಾಪಣ: ನಿವಾರಣೆ; ರಚಿಸು: ನಿರ್ಮಿಸು; ಪುಣ್ಯ: ಸದಾಚಾರ; ಉದಯ: ಹುಟ್ತು; ಪೂರ್ವ: ಹಿಂದಿನ; ಮಹೀಶ: ರಾಜ; ಕುಲ: ವಂಶ; ನೋಂತು: ವ್ರತ; ಸಂತೋಷ: ಸಂತಸ, ಹರ್ಷ; ಜಲಧಿ: ಸಾಗರ; ತೇಕಾಡು: ಕೀಳು: ಕೆಳಮಟ್ಟ; ಮೇಲು: ಎತ್ತರದ, ಹೆಚ್ಚಾದ; ಅವನೀಶ: ರಾಜ;

ಪದವಿಂಗಡಣೆ:
ಲೇಸು+ಮಾಡಿದೆ+ ನಾಕವನು+ ಖಳರ್
ಈಸು+ದಿವಸ +ವಿಭಾಡಿಸಿದರೆ+ ಸು
ರೇಶನ್+ಆಪತ್ತಿಂಗೆ +ನಿರ್ವ್ವಾಪಣವ+ ರಚಿಸಿದೆಲ
ಈಸು +ಪುಣ್ಯೋದಯಕೆ +ಪೂರ್ವ+ಮ
ಹೀಶ+ಕುಲ +ನೋಂತುದೆ+ಎನುತ +ಸಂ
ತೋಷಮಯ +ಜಲಧಿಯಲಿ +ಕೀಳ+ಮೇಲಾದನ್+ಅವನೀಶ

ಅಚ್ಚರಿ:
(೧) ಅವನೀಶ, ಮಹೀಶ – ಸಮನಾರ್ಥಕ ಪದ
(೨) ರಾಜ ನನ್ನು ಕರೆಯುವ ಪರಿ – ಸುರೇಶ, ಮಹೀಶ, ಅವನೀಶ
(೩) ಯುಧಿಷ್ಠಿರನ ಪ್ರೌಢಿಮೆ – ಈಸು ಪುಣ್ಯೋದಯಕೆ ಪೂರ್ವಮಹೀಶಕುಲ ನೋಂತುದೆ
(೪) ಸಂತೋಷಪಟ್ಟನು ಎನ್ನುವ ಪರಿ – ಸಂತೋಷಮಯ ಜಲಧಿಯಲಿ ಕೀಳಮೇಲಾದನವನೀಶ