ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದವು ಭೂಪ ಕೇಳೆಂದ (ಗದಾ ಪರ್ವ, ೫ ಸಂಧಿ, ೧೦ ಪದ್ಯ)
ತಾತ್ಪರ್ಯ:
ಎಲೈ ಧರ್ಮಜ ಕೇಳು, ನಮ್ಮ ತಾಯಿಯ ಒಡಹುಟ್ಟಿದವನಾದ ಕಂಸನು ನಮಗೆ ಸೋದರಮಾವ. ಮಮತೆಯಿಲ್ಲದೆ, ಹಲವು ಮೋಸಗಳಿಂದ ನಮ್ಮನ್ನು ಕೊಲ್ಲಲು ಹವಣಿಸಿದನು. ಹಿಂಸೆಯಿಂದಲೇ ಅವನನ್ನು ಕೊಂದೆವು. ಸೃಗಾಲನು ಮಾಯಾ ಯುದ್ಧವನ್ನು ಮಾಡಿ ನಮ್ಮನ್ನು ಜಯಿಸಲು ಬಂದಾಗ ಅವನ ಮಾಯೆಯ ಕತ್ತಲನ್ನು ಮಾಯೆಯಿಂದಲೇ ಹೋಗಲಾಡಿಸಿಕೊಂಡೆವು ಎಂದು ಕೃಷ್ಣನು ನುಡಿದನು.
ಅರ್ಥ:
ತಾಯಿ: ಅಮ್ಮ; ಒಡಹುಟ್ಟು: ಜೊತೆಯಲ್ಲಿ ಜನಿಸು; ನಿರ್ಮಮತೆ: ಪ್ರೀತಿಯಿಲ್ಲದ; ನಿರ್ದಾಟಿಸು: ವಿಶೇಷವಾಗಿ ಅಪ್ಪಳಿಸು; ಕ್ರಮ: ರೀತಿ; ಹಿಂಸೆ: ನೋವು; ಆಕೃತಿ: ರಚನೆ; ರಚಿಸು: ನಿರ್ಮಿಸು; ಸಮರ: ಯುದ್ಧ; ನೃಪ: ರಾಜ; ಆಕ್ರಮಿಸು: ದಾಳಿ ನಡೆಸುವುದು; ಠಕ್ಕು: ಮೋಸ; ಮಾಯೆ: ಗಾರುಡಿ; ತಿಮಿರ: ಅಂಧಕಾರ; ಗೆಲಿ: ಜಯಿಸು; ಭೂಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಎಮಗೆ +ತಾಯ್+ಒಡಹುಟ್ಟಿದನು+ ನಿ
ರ್ಮಮತೆಯಲಿ +ನಿರ್ದಾಟಿಸಿದನ
ಆ+ಕ್ರಮದಲೇ +ಕಂಸಂಗೆ +ಹಿಂಸಾಕೃತಿಯ+ ರಚಿಸಿದೆವು
ಸಮರದೊಳಗೆ+ ಸೃಗಾಲ+ನೃಪನ
ಆಕ್ರಮಿಸಿದನು +ಠಕ್ಕಿನಲಿ+ ಮಾಯಾ
ತಿಮಿರವನು +ಮಾಯೆಯಲಿ +ಗೆಲಿದವು+ ಭೂಪ +ಕೇಳೆಂದ
ಅಚ್ಚರಿ:
(೧) ಗೆಲ್ಲುವ ಕ್ರಮ – ಮಾಯಾ ತಿಮಿರವನು ಮಾಯೆಯಲಿ ಗೆಲಿದವು
(೨) ನಿ ಕಾರದ ಪದಗಳ ಬಳಕೆ – ನಿರ್ಮಮತೆ, ನಿರ್ದಾಟಿಸಿ