ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ (ಗದಾ ಪರ್ವ, ೫ ಸಂಧಿ, ೧೨ ಪದ್ಯ)
ತಾತ್ಪರ್ಯ:
ಜೂಜು, ಬೇಟೆಗಳು ಕ್ಷತ್ರಿಯರ ವಿನೋದಗಳು. ಕಪಟದ ಜೂಜನ್ನು ತಿಳಿಯದೆ ಆಡಿ ಮಾಯೆಗೆ ಪರಾಜಿತರಾಗಿ ಭೂಮಿಯನ್ನು ಸೋತಿರಿ. ಅದು ಹಾಗಿರಲಿ, ನಿಮ್ಮ ರಾಣಿಯುಟ್ಟ ಸೀರೆಯನ್ನು ಭಯವಿಲ್ಲದೆ ಸುಲಿಸಿದ ಇವನು ಸಜ್ಜನನೇ ಎಂದು ಕೃಷ್ಣನು ಕೇಳಿದನು.
ಅರ್ಥ:
ದ್ಯೂತ: ಪಗಡೆಯಾಟ, ಜೂಜು; ಮೃಗ: ಪ್ರಾಣಿ; ವ್ಯಸನ: ಗೀಳು, ಚಟ; ನೃಪ: ರಾಜ; ಜಾತಿ: ಕುಲ; ವಿನೋದ: ವಿಹಾರ, ಕ್ರೀಡೆ; ಕಪಟ: ಮೋಸ; ನೃಪ: ರಾಜ; ಧರ್ಮ: ಧಾರಣೆ ಮಾಡಿದುದು; ಮಾಯ: ಗಾರುಡಿ; ಅಭಿಯೋಗ: ಒತ್ತಾಯ; ಸೋತು: ಪರಾಜಯ; ನಿರ್ಭೀತಿ: ಭಯವಿಲ್ಲದ ಸ್ಥಿತಿ; ಇಳೆ: ಭೂಮಿ; ಅರಸಿ: ರಾಣಿ; ಉಟ್ಟು: ಬಟ್ಟೆ, ಸೀರೆ; ಸುಲಿ: ತೆಗೆ, ಕಳಚು; ಸುಜನ: ಒಳ್ಳೆಯ ಮನುಷ್ಯ; ಭೂಪ: ರಾಜ; ಹೇಳು: ತಿಳಿಸು;
ಪದವಿಂಗಡಣೆ:
ದ್ಯೂತ +ಮೃಗ+ಯಾ+ವ್ಯಸನವಿವು+ ನೃಪ
ಜಾತಿಗಾದ+ ವಿನೋದ +ಕಪಟ
ದ್ಯೂತವಿದು +ನೃಪಧರ್ಮವೇ +ಮಾಯ+ಅಭಿಯೋಗದಲಿ
ಸೋತಿರ್+ಇಳೆಯನ್+ಅದಂತಿರಲಿ +ನಿ
ರ್ಭೀತಿಯಲಿ +ನಿಮ್ಮರಸಿ+ಉಟ್ಟುದನ್
ಈತ +ಸುಲಿಸಿದನ್+ಇವನು +ಸುಜನನೆ +ಭೂಪ +ಹೇಳೆಂದ
ಅಚ್ಚರಿ:
(೧) ನೃಪ ಜಾತಿಗೆ ವಿನೋದ – ದ್ಯೂತ ಮೃಗಯಾವ್ಯಸನವಿವು ನೃಪ ಜಾತಿಗಾದ ವಿನೋದ
(೨) ಕೌರವನ ಬಗ್ಗೆ ಕೃಷ್ಣನಾಡಿದ ಮಾತು – ನಿರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ