ಪದ್ಯ ೧೧: ತಾರಕನ ಮಕ್ಕಳ ಪ್ರಭಾವ ಹೇಗಿತ್ತು?

ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರು ಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ (ಕರ್ಣ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ತಾರಕನ ಮಕ್ಕಳು ದೇವೇಂದ್ರನ ಭಂಡಾರವನ್ನು ಕೊಳ್ಳೆಹೊಡೆದು ಅವನ ಹೆಂಡತಿಯನ್ನು ವಶಕ್ಕೆ ಪಡೆದರು. ದೇವತಾ ಸ್ತ್ರೀಯರನೆಲ್ಲಾ ರಾಕ್ಷಸರ ಮನೆಗಳ ದಾಸಿಗಳಾದರು. ಮೂರು ಲೋಕಗಳಲ್ಲಿ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಗಳ ಮಾತನ್ನು ಮೀರಿ ಬದುಕುವವರೇ ಇಲ್ಲದಂತಾಯಿತು. ಸಮಸ್ತ ಜಗತ್ತೂ ಅವರ ಕೈವಶವಾಯಿತು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ಸುರಪತಿ: ದೇವತೆಗಳ ಒಡೆಯ (ಇಂದ್ರ); ಭಂಡಾರ: ಖಜಾನೆ; ಹೆಂಡಿರು: ಹೆಂಗಸರು; ಸಹಿತ: ಜೊತೆ, ಎಲ್ಲರೂ; ನಿರ್ಜರ: ದೇವತೆ; ನಾರಿ: ಸ್ತ್ರೀ; ತೊತ್ತು: ದಾಸಿ, ಸೇವಕಿ; ಅಮರ: ದೇವತೆ; ಅರಿ: ವೈರಿ; ಅಮರಾರಿ: ದನುಜರು; ಮನೆ: ಆಲಯ; ಮೂರು: ತ್ರಿ; ಭುವನ: ಜಗತ್ತು, ಪ್ರಪಂಚ; ಆಣೆ: ಪ್ರಮಾಣ, ಮಾತು; ಮೀರಿ: ದಾಟಿ; ಬದುಕು: ಜೀವಿಸು; ಕಡೆ: ಕೊನೆ; ಮಕ್ಕಳು: ಸುತರು; ಕೈವರ್ತಿಸು: ಕೈವಶ; ಜಗ: ಜಗತ್ತು;

ಪದವಿಂಗಡಣೆ:
ಸೂರೆವೋಯಿತು +ಸುರಪತಿಯ+ ಭಂ
ಡಾರ +ಹೆಂಡಿರು +ಸಹಿತ+ ನಿರ್ಜರ
ನಾರಿಯರು+ ತೊತ್ತಾದರ್+ಅಮರಾರಿಗಳ+ ಮನೆಗಳಿಗೆ
ಮೂರು +ಭುವನದೊಳ್+ಇವದಿರ್+ಆಣೆಯ
ಮೀರಿ +ಬದುಕುವರಿಲ್ಲ+ ಕಡೆಯಲಿ
ತಾರಕನ+ ಮಕ್ಕಳಿಗೆ +ಕೈವರ್ತಿಸಿತು +ಜಗವೆಂದ

ಅಚ್ಚರಿ:
(೧) ಅಪ್ಸರೆ ಎಂದು ಹೇಳಲು ಬಳಸಿದ ಪದ – ನಿರ್ಜರನಾರಿ
(೨) ದನುಜರೆಂದು ಹೇಳಲು ಬಳಸಿದ ಪದ – ಅಮರಾರಿ