ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯುದಲಿ ನಿನ್ನವರು ಹೊಗುವರೆ ಹಸ್ತಿನಾಪುರವ
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ (ಗದಾ ಪರ್ವ, ೧೦ ಸಂಧಿ, ೨೦ ಪದ್ಯ)
ತಾತ್ಪರ್ಯ:
ಎಲೈ ಕೃಷ್ಣಾ, ನೀನು ಪಾಂಡವರನ್ನು ಕಾಯಬಲ್ಲೆಯಾ? ನನ್ನಲ್ಲಿ ಆಯುಧವಿಲ್ಲದ ಮಾತ್ರಕ್ಕೆ ನಿನ್ನವರು ಹಸ್ತಿನಾಪುರಕ್ಕೆ ಹೋಗಬಲ್ಲರೇ? ಇದೋ ಈ ಅಸ್ತ್ರವನ್ನು ಪರಿಹರಿಸು, ನೀನು ಪಾಂಡವಜೀವಿಯಲ್ಲವೇ? ಎನ್ನುತ್ತಾ ಮಂತ್ರಿಸಿ ಒಂದು ಹುಲ್ಲುಕಡ್ಡಿಯನ್ನು ಬಿಟ್ಟನು.
ಅರ್ಥ:
ಕಾಯು: ರಕ್ಷಿಸು; ನಿರಾಯುಧ: ಆಯುಧವಿಲ್ಲದಿರುವ ಸ್ಥಿತಿ; ಹೊಗು: ತೆರಳು; ಆಯು: ಕಾಲ; ಸಾಯಕ: ಬಾಣ, ಶರ, ಕತ್ತಿ; ಪರಿಹರಿಸು: ನಿವಾರಿಸು; ರಾಯ: ರಾಜ; ಜೀವಿ: ಜೀವಿಸುವ; ವರ: ಶ್ರೇಷ್ಠ; ಚಕ್ರ: ಗಾಲಿ; ಆಯುಧ: ಶಸ್ತ್ರ; ಬೋಳೈಸು: ಸಂತೈಸು, ಸಮಾಧಾನ ಮಾಡು; ತೃಣ: ಹುಲ್ಲು;
ಪದವಿಂಗಡಣೆ:
ಕಾಯಬಲ್ಲೈ +ಪಾಂಡವರನು +ನಿ
ರಾಯುಧರು +ನಾವೆಂದು +ನೀನಿರ್ದ್
ಆಯುದಲಿ +ನಿನ್ನವರು +ಹೊಗುವರೆ +ಹಸ್ತಿನಾಪುರವ
ಸಾಯಕವ +ಪರಿಹರಿಸು +ಪಾಂಡವರ್
ಆಯಜೀವಿ+ ಗಡೆನುತ+ ವರ +ಚ
ಕ್ರಾಯುಧನ +ಬೋಳೈಸಿ +ತೃಣದಿಂದ್+ಇಟ್ಟನಾ +ದ್ರೌಣಿ
ಅಚ್ಚರಿ:
(೧) ಕೃಷ್ಣನನ್ನು ಚಕ್ರಾಯುಧನ ಎಂದು ಕರೆದಿರುವುದು;
(೨) ನಿರಾಯುಧ, ಚಕ್ರಾಯುಧ – ಪ್ರಾಸ ಪದಗಳು