ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ (ಗದಾ ಪರ್ವ, ೭ ಸಂಧಿ, ೧೦ ಪದ್ಯ)
ತಾತ್ಪರ್ಯ:
ಭೀಮನ ಬಾಯಲ್ಲಿ ರಕ್ತ ಬಂದಿತು. ಕಣ್ಣುಗುಡ್ಡೆ ಬೆಳ್ಳಗಾದವು. ತಲೆತಿರುಗಿ ಅವನು ಕೆಳಕ್ಕೆ ಬಿದ್ದನು. ಪಾಂಡವರು ಭಯದಿಂದ ಹಾ ಎಂದು ಬಾಯಿ ಬಿಡುತ್ತಿರಲು, ಯಾವ ಅಪಾಯವೂ ಆಗದೆ ಭೀಮನು ಎಚ್ಚತ್ತು ಸುತ್ತಲೂ ನೋಡಿದನು.
ಅರ್ಥ:
ಹೊಕ್ಕು: ಸೇರು; ರುಧಿರ: ರಕ್ತ, ನೆತ್ತರು; ಕಂಗಳು: ನಯನ, ಕಣ್ಣು; ಆಯ: ಪ್ರಮಾಣ; ತಪ್ಪಿತು: ಸರಿಯಿಲ್ಲದಾಗು; ಡೆಂಢಣಿಸು: ಕಂಪಿಸು, ಕೊರಗು; ಕಲಿ: ಶೂರ; ವಾಯುಸುತ: ಭೀಮ; ಅಪ್ಪಳಿಸು: ತಟ್ಟು, ತಾಗು; ಬಿದ್ದು: ಎರಗು; ಕಯ್ಯ: ಹಸ್ತ; ಗದೆ: ಮುದ್ಗರ; ಕಳಚು: ಬೇರ್ಪಡಿಸು, ಬೇರೆಮಾಡು; ತನ್ನವರು: ಸಂಬಂಧಿಕರು; ಭಯ: ದಿಗಿಲು; ಬಿಡೆ: ತೊರೆ; ನಿಮಿಷಾರ್ಧ: ಕೂಡಲೆ; ನಿರಪಾಯ: ಅಪಾಯವಿಲ್ಲದೆ; ನೋಡು: ವೀಕ್ಷಿಸು; ಚೇತರಿಸು: ಎಚ್ಚರಗೊಳ್ಳು; ಕೆಲಬಲ: ಅಕ್ಕಪಕ್ಕ;
ಪದವಿಂಗಡಣೆ:
ಬಾಯೊಳ್+ಒಕ್ಕುದು +ರುಧಿರ +ಕಂಗಳದ್
ಆಯ +ತಪ್ಪಿತು +ಡೆಂಢಣಿಸಿ +ಕಲಿ
ವಾಯುಸುತನ್+ಅಪ್ಪಳಿಸಿ+ ಬಿದ್ದನು+ ಕಯ್ಯ +ಗದೆ +ಕಳಚಿ
ಹಾ+ಎನುತ +ತನ್ನವರು +ಭಯದಲಿ
ಬಾಯ +ಬಿಡೆ +ನಿಮಿಷಾರ್ಧದಲಿ +ನಿರ
ಪಾಯನ್+ಎದ್ದನು+ ನೋಡಿದನು +ಚೇತರಿಸಿ +ಕೆಲಬಲನ
ಅಚ್ಚರಿ:
(೧) ಭೀಮನ ಸ್ಥಿತಿ – ಬಾಯೊಳೊಕ್ಕುದು ರುಧಿರ ಕಂಗಳದಾಯ ತಪ್ಪಿತು ಡೆಂಢಣಿಸಿ ಕಲಿ ವಾಯುಸುತನಪ್ಪಳಿಸಿ ಬಿದ್ದನು