ಪದ್ಯ ೧೨: ಯಾವ ಕಾರಣವು ದುರ್ಯೋಧನನನ್ನು ಕೋಪಗೊಳಿಸಿತು?

ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನು ಭಾವನನೇಕೆ ನುಡಿಸುವಿರೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನ ಅಂತರಗವನ್ನು ತಿಳಿಯಲು, ನಿನ್ನ ಅಂತರಂಗದಲ್ಲೇನಿದೆ, ಹೃದಯಾಗ್ನಿಯು ಏಕೆ ಉದ್ಭವವಾಯಿತು? ಮಾನನಾಡು ನನ್ನಾಣೆ, ಯಾವ ಭಯವೂ ಇಲ್ಲದೆ ಹೇಳು ಎಂದು ಕೇಳಿದನು. ದುರ್ಯೋಧನನು ಯುಧಿಷ್ಠಿರನ ವೈಭವವು ನನ್ನ ಮನಸ್ಸನ್ನು ಸುಟ್ಟಿದೆ, ಇಂತಹ ನನ್ನನ್ನೇಕೆ ಮಾತನಾಡಿಸುವಿರಿ ಎಂದು ಹೇಳಿದನು.

ಅರ್ಥ:
ಕೃಶಾನು: ಅಗ್ನಿ; ಹೃದಯ: ಎದೆ; ಅಂತಸ್ಥ: ಅಂತರಂಗ; ಸಂಭವ: ಉತ್ಪತ್ತಿ; ನುಡಿ: ಮಾತು; ದುಮ್ಮಾನ: ದುಃಖ; ಬೇಡ: ಸಲ್ಲದು, ಕೂಡದು; ಆಣೆ: ಪ್ರಮಾಣ; ಸಂತೈಸು: ಸಾಂತ್ವನಗೊಳಿಸು, ಆದರಿಸು; ನೃಪ: ರಾಜ; ಭಯ: ಅಂಜಿಕೆ; ಸೂನು: ಮಗ; ವೈಭವ: ಶಕ್ತಿ, ಸಾಮರ್ಥ್ಯ; ವಹ್ನಿ: ಅಗ್ನಿ; ದಗ್ಧ: ದಹಿಸಿದುದು, ಸುಟ್ಟುದು; ಮನ: ಮನಸ್ಸು; ಊನ: ಕುಂದು ಕೊರತೆ; ಭಾವ: ಭಾವನೆ, ಚಿತ್ತವೃತ್ತಿ; ನುಡಿ: ಮಾತಾಡು; ಭೂಪ: ರಾಜ;

ಪದವಿಂಗಡಣೆ:
ಏನು +ನಿನ್ನಂತಸ್ಥ+ ಹೃದಯ +ಕೃ
ಶಾನು +ಸಂಭವವೇಕೆ+ ನುಡಿ+ ದು
ಮ್ಮಾನ +ಬೇಡ್+ಎನ್ನಾಣೆನುತ+ ಸಂತೈಸಿದನು +ನೃಪನ
ಏನು +ಭಯ +ಬೇಡೆಂದ್+ಎನಲು+ ಯಮ
ಸೂನು +ವೈಭವ +ವಹ್ನಿ+ ದಗ್ಧ +ಮನ
ಊನು+ ಭಾವನನ್+ಏಕೆ +ನುಡಿಸುವಿರೆಂದನಾ +ಭೂಪ

ಅಚ್ಚರಿ:
(೧) ನೃಪ, ಭೂಪ – ಸಮನಾರ್ಥಕ ಪದ