ಪದ್ಯ ೩೬: ನಾರದರು ಕಂಪನನನ್ನು ಹೇಗೆ ಸಂತೈಸಿದರು?

ಆ ಮಹಾಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ (ದ್ರೋಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಆ ಮಹಾ ಮೃತ್ಯುವನ್ನು ಹುಟ್ಟಿಸಿದ ಮಹಾದೇವನೇ ಮೊದಲಾದವರು ಅವಳನ್ನು ಕಳುಹಿಸಿ ಕೊಡಲಾರರು. ನಿನ್ನ ಮಗನ ಮರಣದ ತಾಪವನ್ನು ಕಳೆದುಕೋ ಎಂದು ಹೇಳಿ ಕಂಪನನನ್ನು ಸಂತೈಸಿದನು.

ಅರ್ಥ:
ಮೃತ್ಯು: ಸಾವು; ಹುಟ್ಟು: ಜನಿಸು; ಆದಿ: ಮುಂತಾದ; ದೇವ: ಭಗವಂತ; ಕಾಮಿನಿ: ಹೆಣ್ಣು; ಕಳುಹು: ಕಳಿಸು; ಬೋಧಿಸು: ತಿಳಿಸು; ಭೂಮಿಪತಿ: ರಾಜ; ಸುತ: ಮಗ; ಮೃತಿ: ಸಾವು; ಉದ್ದಾಮ: ಶ್ರೇಷ್ಠ; ತಾಪ: ಬಿಸಿ, ಬೇನೆ; ಕಳೆ: ನಿವಾರಿಸು; ಮುನಿ: ಋಷಿ; ಸಂತವಿಡು: ಸಂತೈಸು; ಭೂಪತಿ: ರಾಜ;

ಪದವಿಂಗಡಣೆ:
ಆ +ಮಹಾ+ಮೃತ್ಯುವನು +ಹುಟ್ಟಿಸಿದ
ಆ+ ಮಹಾದೇವಾದಿ +ದೇವರು
ಕಾಮಿನಿಯ +ಕಳುಹಲ್ಕೆ+ ಬಾರದೆನುತ್ತ+ ಬೋಧಿಸಲು
ಭೂಮಿಪತಿ +ನಿಜಸುತನ +ಮೃತಿ+
ಉದ್ದಾಮ +ತಾಪವ+ ಕಳೆಯಬೇಕೆಂದ್
ಆ+ ಮುನೀಶ್ವರ +ಸಂತವಿಟ್ಟನು +ಕಂಪ+ಭೂಪತಿಯ

ಅಚ್ಚರಿ:
(೧) ಭೂಮಿಪತಿ, ಭೂಪತಿ – ಸಮಾನಾರ್ಥಕ ಪದ
(೨) ಮಹಾಮೃತ್ಯು, ಮಹಾದೇವ – ಮಹಾ ಪದದ ಬಳಕೆ

ಪದ್ಯ ೪: ಧರ್ಮಜನೇಕೆ ಮೂರ್ಛಿತನಾದನು?

ಕುಲಿಶ ಹತಿಯಲಿ ಕುಲಶಿಲೋಚ್ಚಯ
ವಿಳೆಗೆ ಕೆಡೆವಂದದಲಿ ನಿಜಸುತ
ನಳಿದ ವಾರ್ತಾ ವಚನದುಪಟಳಕವನಿಪಾಲಕನು
ಮಲಗಿದನು ಮೈಮರೆದು ಮಹಿಮಂ
ಡಳಿಕರೊಳು ಗುಜುಗುಜಿನೊಳಿರೆ ಕಳ
ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು (ದ್ರೋಣ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ವಜ್ರಾಯುಧದ ಹೊಡೆತದಿಂದ ಕುಲಪರ್ವತದ ಶಿಖರಗಳ ಕಲ್ಲುಗಳು ಕೆಳಗೆ ಬೀಳುವಂತೆ ಅಭಿಮನ್ಯುವಿನ ಸಾವಿನ ವಿಷಯದ ದುಃಖಕ್ಕೆ ದೊರೆಯು ಮೂರ್ಛಿತನಾಗಿ ಮಲಗಿದನು. ಮಾಂಡಲಿಕ ರಾಜರು ಗುಜುಗುಜು ಎಂದು ಮಾತನಾಡುತ್ತಿರಲು ಪಾಂಡವ ಸೇನೆಯು ದುಃಖದಿಂದ ತುಂಬಿತು.

ಅರ್ಥ:
ಕುಲಿಶ: ವಜ್ರಾಯುಧ; ಹತಿ: ಪೆಟ್ಟು, ಹೊಡೆತ; ಕುಲ: ವಂಶ; ಶಿಲೋಚ್ಚಯ: ಕಲ್ಲುಗಳಿಂದ ಕೂಡಿದ್ದು, ಬೆಟ್ಟ; ಇಳೆ: ಭೂಮಿ; ಕೆಡೆ:ಬೀಳು, ಕುಸಿ; ಸುತ: ಮಗ; ಅಳಿ: ಸಾವು; ವಾರ್ತೆ: ಸುದ್ದಿ; ವಚನ: ಮಾತು; ಉಪಟಳ: ತೊಂದರೆ, ಹಿಂಸೆ; ಅವನಿಪಾಲಕ: ರಾಜ; ಮಲಗು: ನಿದ್ರಿಸು; ಮೈಮರೆ: ಜ್ಞಾನತಪ್ಪು; ಮಹಿ: ಭೂಮಿ; ಮಂಡಳಿಕ: ರಾಜ, ಪಾಳೆಯಗಾರ; ಗುಜುಗುಜು: ಮೆಲ್ಲನ ಮಾತನಾಡು; ಕಳವಳ: ಗೊಂದಲ; ಮೊಳೆ: ಚಿಗುರು, ಅಂಕುರಿಸು; ಕಟಕ: ಸೈನ್ಯ; ದುಮ್ಮಾನ: ದುಃಖ;

ಪದವಿಂಗಡಣೆ:
ಕುಲಿಶ +ಹತಿಯಲಿ +ಕುಲಶಿಲೋಚ್ಚಯವ್
ಇಳೆಗೆ +ಕೆಡೆವಂದದಲಿ+ ನಿಜಸುತನ್
ಅಳಿದ +ವಾರ್ತಾ +ವಚನದ್+ಉಪಟಳಕ್+ಅವನಿಪಾಲಕನು
ಮಲಗಿದನು+ ಮೈಮರೆದು +ಮಹಿಮಂ
ಡಳಿಕರೊಳು +ಗುಜುಗುಜಿನೊಳ್+ಇರೆ +ಕಳ
ವಳಿಕೆ +ಮೊಳೆತುದು+ ಕಟಕದಲಿ +ದುಮ್ಮಾನಮಯವಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುಲಿಶ ಹತಿಯಲಿ ಕುಲಶಿಲೋಚ್ಚಯವಿಳೆಗೆ ಕೆಡೆವಂದದಲಿ