ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ (ಭೀಷ್ಮ ಪರ್ವ, ೩ ಸಂಧಿ, ೮೯ ಪದ್ಯ)
ತಾತ್ಪರ್ಯ:
ವೀರನೇ, ರಾಕ್ಷಸರನ್ನು ಕಡಿಯುವ ಕೊಡಲಿಯೇ, ವಿಕಾರವಿಲ್ಲದವನೇ, ಗೋಪೀಜಾರನೇ, ಸುಂದರಲೀಲಾ ವಿನೋದಿಯೇ, ಸುಖವು ಮೂರ್ತಿಗೊಂಡು ಬಂದಂತಿರುವವನೇ, ವೇದಗಳಿಗೆ ಅಗಮ್ಯನಾದವನೇ, ವಿಶ್ವಾಅಚೆಗಿರುವವನೇ, ಜಗತ್ತಿಗೆ ಆಧಾರನಾದವನೇ, ಸದಾಚಾರನೇ, ಲಕ್ಷ್ಮೀನಿವಾಸನೇ, ಮನ್ಮಥನಿಗಿಂತಲೂ ಹೆಚ್ಚು ಸುಂದರನಾದವನೇ, ಮುರಾರಿಯೇ ನನ್ನನ್ನು ಸಲಹು ಎಂದು ಕೃಷ್ಣನನ್ನು ಬೇಡಿದನು.
ಅರ್ಥ:
ವೀರ: ಶೂರ, ಪರಾಕ್ರಮ; ದೈತ್ಯ: ರಾಕ್ಷಸ, ಅಸುರ; ಕುಠಾರ: ಕೊಡಲಿ, ಗುದ್ದಲಿ; ಗಳಿತ: ಬಿದ್ದ; ವಿಕಾರ: ಬದಲಾವಣೆ, ಮಾರ್ಪಾಟು; ಜಾರ: ಪರಸ್ತ್ರೀ ಸಂಗ ಮಾಡುವವ; ಗೋಪಿ: ಗೊಲ್ಲ ಜಾತಿಯ ಹೆಂಗಸು, ಗೊಲ್ಲಿತಿ; ಲಲಿತ: ಚೆಲುವಾದ; ವಿಹಾರ: ಕಾಲ ಕಳೆಯುವುದು, ಅಲೆದಾಟ, ತಿರುಗಾಡುವುದು; ನಿಗಮ: ವೇದ, ಶೃತಿ; ವಿದೂರ: ಅತಿದೂರ, ಪಡೆಯಲಸಾಧ್ಯವಾದ; ಸುಖ: ಸಂತೋಷ; ಸಾಕಾರ: ಆಕಾರವನ್ನು ಹೊಂದಿರುವಿಕೆ; ಗತ: ಹಿಂದೆ ಆದುದು; ಪಾರ: ದಡ, ತೀರ; ಧೀರ: ಶೂರ; ಜಗ: ಪ್ರಪಂಚ; ಆಧಾರ: ಆಶ್ರಯ; ಲಸತ್: ಕಾಂತಿಯಿಂದ ಕೂಡಿದ; ಆಚಾರ: ಒಳ್ಳೆಯ ನಡತೆ; ಕಮಲ: ತಾವರೆ; ಆಗಾರ: ಮನೆ; ಭುವನ: ಜಗತ್ತು, ಪ್ರಪಂಚ; ಆಧಾರ: ಆಶ್ರಯ; ನಿರ್ಜಿತ:ಅಜೇಯ, ಗೆದ್ದ; ಮಾರ: ಮನ್ಮಥ; ಮುರಹರ: ಕೃಷ್ಣ; ಸಲಹು: ಕಾಪಾಡು, ರಕ್ಷಿಸು;
ಪದವಿಂಗಡಣೆ:
ವೀರ +ದೈತ್ಯಕುಠಾರ+ ಗಳಿತ+ವಿ
ಕಾರ +ಗೋಪೀಜಾರ+ ಲಲಿತ+ವಿ
ಹಾರ +ನಿಗಮವಿದೂರ +ಸುಖಸಾಕಾರ+ ಗತಪಾರ
ಧೀರ+ ಜಗದಾಧಾರ+ ಲಸತ್
ಆಚಾರ+ ಕಮಲ+ಆಗಾರ+ ಭುವನ
ಆಧಾರ +ನಿರ್ಜಿತ+ಮಾರ +ಮುರಹರ+ ಸಲಹ+ಬೇಕೆಂದ
ಅಚ್ಚರಿ:
(೧) ಕೃಷ್ಣನನ್ನು ವರ್ಣಿಸಲು ಬಳಸಿದ ಪದಗಳು, ಎಲ್ಲವೂ ರ ಕಾರದಿಂದ ಅಂತ್ಯಗೊಳ್ಳುತ್ತವೆ – ಗೋಪೀಜಾರ, ಜಗದಾಧಾರ, ಕಮಲಾಗಾರ, ನಿರ್ಜಿತಮಾರ ದೈತ್ಯಕುಠಾರ, ನಿಗಮವಿದೂರ, ಮುರಹರ, ಲಲಿತವಿಹಾರ, ಗಳಿತವಿಕಾರ, ಲಸದಾಚಾರ