ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೀಚಕ
ರಾಯನಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡಿಕಿದನು ಸತಿಯ (ವಿರಾಟ ಪರ್ವ, ೩ ಸಂಧಿ, ೧೩ ಪದ್ಯ)
ತಾತ್ಪರ್ಯ:
ವ್ಯರ್ಥವಾದ, ಇಲ್ಲಸಲ್ಲದ ಮಾತನ್ನಾಡಿದರೆ ನಿನ್ನ ಬಾಯಿಗೆ ಹುಳು ಬಿದ್ದೀತು, ನಿನ್ನ ಜೊಲ್ಲುಸುರಿಸುವ ನಾಯಿ ಬುದ್ಧಿಯನ್ನು ಬಿಡು, ಸುದೇಷ್ಣೆಯು ನನ್ನನ್ನು ಜೇನು ತರಲು ಕಳಿಸಿರುವುದರಿಂದ ನಾನಿಲ್ಲಿಗೆ ಬಂದಿದ್ದೇನೆ, ನೀನು ಸಾಯಬೇಕೆನ್ನಿಸಿದರೆ ಶೂಲಕ್ಕೆ ಹಾಯ್ದು ಪ್ರಾಣವನ್ನು ಬಿಡು ಎಂದು ಹೇಳಲು, ನಿನ್ನ ಮಾತುಗಳಿಂದ ನನಗಾವ ನೋವು ಇಲ್ಲ ಎನ್ನುತ್ತಾ ಆಕೆಯ ಕೈಯನ್ನು ಹಿಡಿದನು.
ಅರ್ಥ:
ಹುಳು: ಕ್ರಿಮಿ; ಬಯಲು: ವ್ಯರ್ಥವಾದುದು; ನುಡಿ: ಮಾತು; ನಾಯಿ: ಶ್ವಾನ; ಬೇಡ: ನಿಲ್ಲಿಸು; ರಾಯ: ರಾಜ; ರಾಯನಂಗನೆ: ರಾಣಿ; ಕಳುಹು: ಕಳಿಸು; ಬಂದೆ: ಆಗಮನ; ಮಧು: ಜೇನುತುಪ್ಪ; ತರಲು: ತೆಗೆದುಕೊಂಡು; ಸಾವು: ಮರಣ; ಹಸಿ: ಅತಿಯಾಗಿ ಬಯಸು, ತಾಜಾ; ಶೂಲ: ಈಟಿ; ಹಾಯಿ: ಮೇಲೆಬೀಳು, ಚಾಚು; ಹೋಗು: ತೆರಳು; ಬೈಗಳು: ಜರೆದ ಮಾತು; ನೋಯಿಸು: ತೊಂದರೆ ನೀಡು; ತುಡುಕು: ಹೋರಾಡು, ಸೆಣಸು; ಸತಿ: ಹೆಣ್ಣು;
ಪದವಿಂಗಡಣೆ:
ಬಾಯಿ +ಹುಳುವುದು +ಬಯಲ +ನುಡಿದೊಡೆ
ನಾಯಿತನ+ ಬೇಡ್+ಎಲವೊ +ಕೀಚಕ
ರಾಯನಂಗನೆ+ ಕಳುಹೆ +ಬಂದೆನು +ಮಧುವ +ತರಲೆಂದು
ಸಾಯಬೇಕೇ +ಹಸಿದ+ ಶೂಲವ
ಹಾಯಿ+ ಹೋಗ್+ಎನೆ +ನಿನ್ನ +ಬೈಗಳು
ನೋಯಿಸುವವೇ+ ತನ್ನನ್+ಎನುತವೆ+ ತುಡಿಕಿದನು +ಸತಿಯ
ಅಚ್ಚರಿ:
(೧) ಬಾಯಿಗೆ ಹುಳು ಬೀಳಲಿ ಎಂದು ಹೇಳುವ ಪರಿ – ಬಾಯಿ ಹುಳುವುದು ಬಯಲ ನುಡಿದೊಡೆ