ಪದ್ಯ ೪೮: ಅಭಿಮನ್ಯುವು ದುಶ್ಯಾಸನನ ಬಗ್ಗೆ ಏನು ಯೋಚಿಸಿದನು?

ತಾಯ ತುರುಬಿಗೆ ಹಾಯ್ದ ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳ ದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ (ದ್ರೋಣ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ತನ್ನ ತಾಯಿಯ ಮುಡಿಗೆ ಕೈಯಿಟ್ಟು ಈ ಪಾಪಿ ನಾಯಿಯನ್ನು ಉಳಿಸಿ ಅವನೊಡನೆ ಆಟವಾಡುವುದೇ? ಇವನ ದೇಹವನ್ನು ಕುಕ್ಕಿ ರಕ್ತವನ್ನು ಬಾಚಿ ತಾಯಿಯನ್ನು ಕರೆಸುತ್ತೇನೆಂದು ದ್ರೌಪದಿಯ ಕಮಲದಂತ ಕಣ್ಣುಗಳನ್ನು ನೋಡಿ ಯೋಚಿಸಿ ಅಭಿಮನ್ಯುವು ಒಂದು ದಿವ್ಯ ಬಾಣವನ್ನು ಬಿಲ್ಲಿನಲ್ಲಿ ಹೂಡಿದ ನಂತರ ಮನಸ್ಸಿನಲ್ಲಿ ಹೀಗೆ ಯೋಚಿಸಿದನು.

ಅರ್ಥ:
ತಾಯ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ಹಾಯ್ದು: ಚಾಚು; ಪಾತಕಿ: ಪಾಪಿ; ನಾಯ: ಕುನ್ನಿ, ಶ್ವಾನ; ಕೊಂಡಾಡು: ಆಟವಾಡು; ಕೊಬ್ಬು: ಅಹಂಕಾರ, ಸೊಕ್ಕು; ಕಾಯ: ದೇಹ; ಕದುಕು: ಕಡಿ; ಇರಿ: ಚುಚ್ಚು; ನೆತ್ತರು: ರಕ್ತ; ನೊರೆ: ಬುರುಗು; ಬಾಸಣಿಸು: ಮುಚ್ಚು; ಕರಸು: ಬರೆಮಾಡು; ಕಮಳ: ತಾವರೆ; ಆಯತ: ವಿಶಾಲವಾದ; ಅಂಬಕ: ಕಣ್ಣು; ಅನುಪಮ: ಹೋಲಿಕೆಗೆ ಮೀರಿದ; ಸಾಯಕ: ಬಾಣ, ಶರ; ಹೂಡು: ಅಣಿಯಾಗು; ನೋಡು: ವೀಕ್ಷಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ತಾಯ +ತುರುಬಿಗೆ +ಹಾಯ್ದ +ಪಾತಕಿ
ನಾಯ +ಕೊಂಡಾಡುವರೆ +ಕೊಬ್ಬಿದ
ಕಾಯವನು +ಕದುಕಿರಿದು +ನೆತ್ತರ +ನೊರೆಯ +ಬಾಸಣಿಸಿ
ತಾಯ +ಕರಸುವೆನೆನುತ +ಕಮಳ +ದ
ಳಾಯತಾಂಬಕನ್+ಅಳಿಯನ್+ಅನುಪಮ
ಸಾಯಕವ +ಹೂಡಿದನು +ನೋಡಿದನೊಂದು +ಚಿತ್ತದಲಿ

ಅಚ್ಚರಿ:
(೧) ತಾಯ, ನಾಯ, ಕಾಯ – ಪ್ರಾಸ ಪದಗಳು
(೨) ದುಶ್ಯಾಸನನ್ನು ಬಯ್ಯುವ ಪರಿ – ತಾಯ ತುರುಬಿಗೆ ಹಾಯ್ದ ಪಾತಕಿ ನಾಯ ಕೊಂಡಾಡುವರೆ

ಪದ್ಯ ೨೧: ಅಪ್ಸರೆಯರ ಬೀದಿಯು ಯಾರಿಂದ ತುಂಬಿತು?

ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು (ಭೀಷ್ಮ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭುಜಾಗ್ರವನ್ನು ಸಜ್ಜುಮಾದಿ ಶತ್ರುಗಳನ್ನು ಬಡಿಯುವ, ಕಾಲಿಂದ ಕೆಳಗೆ ಬಿದ್ದವರನ್ನು ಮೆಟ್ಟುವ ಮತ್ತೆ ಮತ್ತೆ ಆಯಾಸ ಪರಿಹಾರಕ್ಕಾಗಿ ತಾಂಬೂಲವನ್ನು ಹಾಕಿಕೊಳ್ಳುವ, ಶತ್ರುಗಳನ್ನು ಕರೆಕರೆದು ಒರೆಯಿಂದ ಕತ್ತಿಯನ್ನೆಳೆಯುವ, ಅವರಿಗೆ ತಮ್ಮ ನಾಯಿಯ ಹೆಸರಿಡುವ, ತೊಡರು ಕೊಡುವ, ಬೈಯುವ ವೀರಭಟರಿಂದ ಅಮರಾವತಿಯ ಅಪ್ಸರೆಯರ ಬೀದಿಗಳು ತುಂಬಿದವು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಒಡೆ: ಚೂರುಮಾದು; ಕಾಲು: ಪಾದ; ಮಿಡಿಯ: ತವಕಿಸು, ಹಾರು; ಮೆಟ್ಟು: ತುಳಿ; ತಂಬುಲ: ವೀಳೆಯ, ಅಡಿಕೆ; ತೆಗೆ: ಹೊರತರು; ಕರೆ: ಬರೆಮಾದು; ಉರ್ಚು: ಹೊರಕ್ಕೆ ತೆಗೆ; ನಾಯ: ನಾಯಿ, ಶ್ವಾನ; ಹೆಸರು: ನಾಮ; ತೊಡರು: ಸರಪಳಿ, ಸಂಕೋಲೆ; ಬೈವ: ಜರಿಯುವ; ಭಟ್ಟ: ಸೈನಿಕ; ಬಿಡು: ತೊರೆ; ಕಾದು: ಹೋರಾಡು; ವೀರ: ಶೂರ; ಭಟ: ಸೈನಿಕ; ಅಮರಾವತಿ: ಸ್ವರ್ಗ; ಸೊಂಪು: ಸೊಗಸು, ಚೆಲುವು; ಸೂಳೆ: ವೇಶ್ಯೆ; ಕೇರಿ: ಬೀದಿ;

ಪದವಿಂಗಡಣೆ:
ಮುಡುಹುಗಳೊಳ್+ಒಡೆಹೊಯ್ವ+ ಕಾಲಲಿ
ಮಿಡಿಯ +ಮೆಟ್ಟುವ +ತಂಬುಲವ +ತೆಗೆ
ದಿಡುವ +ಕರೆಕರೆದ್+ಒರೆಯನ್+ಉರ್ಚುವ +ನಾಯ +ಹೆಸರಿಡುವ
ತೊಡರು+ಕಟ್ಟುವ +ಬೈವ +ಭಟ್ಟರ
ಬಿಡುವ +ಕಾದುವ +ವೀರ +ಭಟರಿಂದ್
ಇಡಿದುದ್+ಅಮರಾವತಿಯ +ಸೊಂಪಿನ +ಸೂಳೆ+ಕೇರಿಗಳು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೈವ ಭಟ್ಟರ ಬಿಡುವ

ಪದ್ಯ ೫೯: ದ್ರೌಪದಿ ಏಕೆ ಬಸವಳಿದಳು?

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದ ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ
ಇಂದು ಕೀಚಕನಾಯ ಕಾಲಲಿ
ನೊಂದೆ ನಾನಿದು ಮೂರು ಬಾರಿಯ
ಬಂದ ಭಂಗವೆ ಸಾಕೆನುತ ಬಸವಳಿದಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಎಲ್ಲರ ಸಮೂಹದಲ್ಲಿ ಪಾಪಿ ದುರ್ಯೋಧನನು ನನ್ನ ಮಾನ ಕಳೆಯಲು ಅಂದು ನನ್ನ ತಲೆಯ ಮುಂಭಾಗವನ್ನು ಹಿಡಿದು ಎಳೆದನು. ಅರಣ್ಯವಾಸದಲ್ಲಿದ್ದಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದನು, ಈ ದಿನ ಕೀಚಕನು ನನ್ನನ್ನು ಕಾಲಿನಿಂದ ಒದೆದನು. ಈ ಮೂರು ಭಂಗಗಳೇ ಸಾಕು ಎಂದು ಅತೀವ ದುಃಖಭರಿತಳಾಗಿ ದ್ರೌಪದಿಯು ಬಳಲಿದಳು.

ಅರ್ಥ:
ಮಂದೆ: ಗುಂಪು, ಸಮೂಹ; ಎಳಸು: ಸೆಳೆ; ಪಾಪಿ: ದುಷ್ಟ; ಮುಂದಲೆ: ತಲೆಯ ಮುಂಭಾಗ; ಬಂದು: ಆಗಮಿಸು; ಬಳಿಕ: ನಂತರ; ಅರಣ್ಯ: ಕಾಡು; ನಾಯ: ಶ್ವಾನ; ಕಾಲು: ಪಾದ; ನೊಂದೆ: ನೋವುಂಡೆ; ಭಂಗ: ಕಷ್ಟ, ಅವಮಾನ; ಸಾಕು: ನಿಲ್ಲಿಸು; ಬಸವಳಿ: ಬಳಲಿಕೆ, ಆಯಾಸ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಮಂದೆಗ್+ಎಳಸಿದ +ಪಾಪಿ +ಕೌರವನ್
ಅಂದು +ಮುಂದಲೆವಿಡಿದ+ ಸೈಂಧವ
ಬಂದು +ಬಳಿಕ+ಅರಣ್ಯ+ವಾಸದೊಳ್+ಎನ್ನನ್+ಎಳೆದೊಯ್ದ
ಇಂದು +ಕೀಚಕ+ನಾಯ +ಕಾಲಲಿ
ನೊಂದೆ +ನಾನ್+ಇದು +ಮೂರು +ಬಾರಿಯ
ಬಂದ +ಭಂಗವೆ+ ಸಾಕೆನುತ+ ಬಸವಳಿದಳ್+ಅಬುಜಾಕ್ಷಿ

ಅಚ್ಚರಿ:
(೧) ಭಂಗವನ್ನೆಸೆದವರು – ಕೌರವ, ಸೈಂಧವ, ಕೀಚಕ
(೨) ಬ ಕಾರದ ಪದಗಳು – ಬಾರಿಯ ಬಂದ ಭಂಗವೆ

ಪದ್ಯ ೩೧: ಭೀಮನು ಏನು ಯೋಚಿಸಿ ಕರ್ಣನನ್ನು ನಿಲ್ಲಿಸಲು ಎದುರಾದನು?

ಆಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ (ಕರ್ಣ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಈ ಕರ್ಣನು ಮತ್ತೆ ಅಣ್ಣನನ್ನು ಅಳಲಿಸುತ್ತಿದ್ದಾನೆ, ಈ ನಾಯನ್ನು ಕೊಲ್ಲದೆ ಕೈ ಬಿಟ್ಟರೆ ಅಣ್ಣನಿಗೆ ಮತ್ತೆ ಮತ್ತೆ ತೊಂದರೆ ಕೊಡುತ್ತಿದ್ದಾನೆ, ಇವನ ತಲೆ ಮತ್ತು ಕೊರಳಿನ ಸಂಧಿಯನ್ನು ತಪ್ಪಿಸಿದರೆ ಸಾಕು ಎಂದುಕೊಂಡು ಭೀಮನು ಆರ್ಭಟಿಸುತ್ತಾ ಕರ್ಣನನ್ನು ಬಾಣಗಳಿಂದ ತಡೆದನು.

ಅರ್ಥ:
ಅಳಲು: ದುಃಖ; ಧರ್ಮಪುತ್ರ: ಯುಧಿಷ್ಠಿರ; ಬಳಿಚು: ಕತ್ತರಿಸು; ಬಿಟ್ಟೆ: ಬಿಡು; ನಾಯ: ಶ್ವಾನ; ಕೊಲ್ಲು: ಸಾಯಿಸು; ಕಳುಹು: ಹಿಂದಿರುಗು; ಬೆಂಬಿಡು: ಹಿಂಬಾಲಿಸದಿರು; ಮರುಕೊಳಿಸು: ಪುನಃ ಕಾಣಿಸಿಕೊಳ್ಳು;ತಲೆ: ಶಿರ; ಕೊರಳು: ಕತ್ತು; ಸಂಪ್ರತಿ:ತಕ್ಷಣ; ಭೇದ: ಮುರಿಯುವುದು; ಬಳಸು: ಉಪಯೋಗಿಸು; ಸಾಕು: ನಿಲ್ಲಿಸು; ಐಸಲೇ: ಅಲ್ಲವೇ; ಉಲಿ: ಧ್ವನಿ; ಕಣೆ: ಬಾಣ; ಕೆದರು: ಹರಡು; ತರುಬು:ತಡೆ, ನಿಲ್ಲಿಸು;

ಪದವಿಂಗಡಣೆ:
ಆಳಲಿಸಿದನೇ +ಧರ್ಮಪುತ್ರನ
ಬಳಿಚಿ +ಬಿಟ್ಟೆನು +ನಾಯ +ಕೊಲ್ಲದೆ
ಕಳುಹಿದರೆ+ ಬೆಂಬಿಡನಲಾ+ ಮರುಕೊಳಿಸಿ+ ಮರುಕೊಳಿಸಿ
ತಲೆ +ಕೊರಳ +ಸಂಪ್ರತಿಗೆ +ಭೇದವ
ಬಳಸಿದರೆ+ ಸಾಕ್+ಐಸಲೇ +ಎನುತ್
ಉಲಿದು +ಕಣೆಗಳ +ಕೆದರಿ+ ಕರ್ಣನ +ತರುಬಿದನು +ಭೀಮ

ಅಚ್ಚರಿ:
(೧) ಕ ಅಕ್ಷರದ ತ್ರಿವಳಿ ಪದ – ಕಣೆಗಳ ಕೆದರಿ ಕರ್ಣನ
(೨) ಕರ್ಣನನ್ನು ಕೋಪದಿಂದ ನಾಯ ಎಂದು ಭೀಮನು ಕರೆಯುವುದು
(೩) ಕೊಲ್ಲುವೆನೆಂದು ಹೇಳಲು – ತಲೆ ಕೊರಳ ಸಂಪ್ರತಿಗೆ ಭೇದವ ಬಳಸಿದರೆ ಸಾಕೈಸಲೇ

ಪದ್ಯ ೧೩: ಧೃತರಾಷ್ಟ್ರನು ಯಾವ ವಿಷವಯವನ್ನು ತಿಳಿಯಲು ಬಯಸಿದನು?

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ (ಕರ್ಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುಃಖದಿಂದ ಧೃತರಾಷ್ಟ್ರ ಸಂಜಯನನ್ನು ಕೇಳುತ್ತಾ, ಭೀಷ್ಮ ಪಿತಾಮಹರು ಗಾಯಗೊಂಡು ಬಾಣಗಳ ಮೇಲೆ ಮಲಗಿದರು, ದ್ರೋಣಾಚಾರ್ಯರ ಪ್ರಾಣದ ತೊಟ್ಟು ಉದುರಿತು, ಕರ್ಣನು ನಮ್ಮನ್ನು ಈ ಸ್ಥಿತಿಗೆ ತಂದನು, ಇನ್ನೂ ದುರ್ಯೋಧನನು ಸಾಯಲಿಲ್ಲವೇ? ಹೋಗಲಿ ಆ ನಾಯಿಯ ಸುದ್ದಿ ಬೇಡ, ಕರ್ಣನು ಅಳಿದನೇ? ಆ ದುಃಖವಾರ್ತೆಯನ್ನು ವಿಸ್ತಾರವಾಗಿ ತಿಳಿಸು ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಘಾಯ: ನೋವು, ಹುಣ್ಣು; ಬಳಿಕ: ನಂತರ; ಆಯುಧ: ಶಸ್ತ್ರ; ಗುರು: ಆಚಾರ್ಯ; ತೊಡಬೆಗಳಚು: ಆಯುಧದ ಸಮೂಹವನ್ನು ಕಳಚು; ಅವಸ್ಥೆ: ಸ್ಥಿತಿ; ತಂದು: ಬರೆಮಾಡು; ಭಾನು: ಸೂರ್ಯ; ನಂದನ: ಮಗ; ಸಾಯನೇ: ಮರಣ ಹೊಂದಿದನೇ; ಮಗ: ಸುತ; ನಾಯ: ನಾಯಿ, ಶ್ವಾನ; ನುಡಿ: ಮಾತು; ಕಡೆ: ಕೊನೆ; ಶೋಕ: ದುಃಖ; ವಿಸ್ತರಿಸು: ವಿವರಣೆ, ವ್ಯಾಪ್ತಿ; ಹೇಳು: ತಿಳಿಸು;

ಪದವಿಂಗಡಣೆ:
ಘಾಯವಡೆದನು +ಭೀಷ್ಮ+ ಬಳಿಕಿನೊಳ್
ಆಯುಧದ +ಗುರು +ತೊಡಬೆಗಳಚಿದನ್
ಈ+ ಅವಸ್ಥೆಗೆ +ನಮ್ಮ +ತಂದನು +ಭಾನು+ನಂದನನು
ಸಾಯನೇ +ಮಗನ್+ಇನ್ನು +ಸಾಕ್+ಆ
ನಾಯ +ನುಡಿಯಂತಿರಲಿ+ ಕರ್ಣಂಗ್
ಆಯಿತೇ +ಕಡೆ +ಶೋಕವನು +ವಿಸ್ತರಿಸಿ+ ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ದುರ್ಯೋಧನನನ್ನು ಬಯ್ಯುವ ಪರಿ – ಸಾಕಾ ನಾಯ ನುಡಿಯಂತಿರಲಿ
(೨) ಕರ್ಣನನ್ನು ಭಾನುನಂದನ ಎಂದು ಕರೆದಿರುವುದು
(೩) ದ್ರೋಣರನ್ನು ಆಯುಧದ ಗುರು ಎಂದು ಕರೆದಿರುವುದು