ನಾಮವನು ನೆರೆನಂಬಿ ಮತ್ತಾ
ನಾಮವನು ನೆನೆದವರು ಪಡೆವರು
ಕಾಮಿತಾರ್ಥವ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೧ ಪದ್ಯ)
ತಾತ್ಪರ್ಯ:
ಭಗವಂತನ ನಾಮವನ್ನು ನಂಬಿ ಅದನ್ನೇ ನೆನೆದವರು ಬಯಸಿದುದನ್ನು ಪಡೆಯುತ್ತಾರೆ. ನಿಮ್ಮ ಶಕ್ತಿ, ನಿಮಗೇ ಗೊತ್ತಿಲ್ಲ. ನಿಮ್ಮ ಮೇಲೆ ಭಗವನ್ನಾಮದ ವಿಶೇಷ ಕೃಪೆಯಿದೆ. ದ್ರೌಪದಿಯ ಮೊರೆಗೆ ಶ್ರೀಕೃಷ್ಣನು ಕರಗಿ ಬಿಡುತ್ತಾನೆ. ಈ ಮಹಿಳೆಯೇ ಶ್ರೀಕೃಷ್ಣನನ್ನು ಬೇಗ ಭಜಿಸಲಿ ಎಂದು ಧೌಮ್ಯರು ಹೇಳಿದರು.
ಅರ್ಥ:
ನಾಮ: ಹೆಸರು; ನೆರೆ: ಜೊತೆಗೂಡು, ಪೂರ್ಣ; ನಂಬು: ವಿಶ್ವಾಸವಿಡು; ನೆನೆ: ಜ್ಞಾಪಿಸು; ಪಡೆ: ಹೊಂದು, ತಾಳು; ಕಾಮಿತಾರ್ಥ: ಇಚ್ಛಿಸಿದ; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ಕೃಪೆ: ಕರುಣೆ; ವಿಶೇಷ: ಅತಿಶಯತೆ; ಕಾಮಿನಿ: ಹೆಣ್ಣು; ಕರಗು: ಕನಿಕರ ಪಡು; ಮಹಿಳೆ: ಹೆಣ್ಣು; ಭಜಿಸು: ಪೂಜಿಸು; ಬೇಗ: ಶೀಘ್ರ;
ಪದವಿಂಗಡಣೆ:
ನಾಮವನು+ ನೆರೆನಂಬಿ +ಮತ್ತ್+ಆ
ನಾಮವನು +ನೆನೆದವರು +ಪಡೆವರು
ಕಾಮಿತಾರ್ಥವ +ನಿಮ್ಮ +ನೆಲೆ +ನಿಮಗ್+ಅರಿಯ+ಬಾರದಲೆ
ನಾಮ +ನಿಮ್ಮಲಿ +ಕೃಪೆ +ವಿಶೇಷವು
ಕಾಮಿನಿಗೆ +ಕರಗುವನು +ಕೃಷ್ಣನು
ಯೀ +ಮಹಿಳೆ+ ಭಜಿಸುವುದು +ಬೇಗದಲೆಂದನಾ+ ಧೌಮ್ಯ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಮಿನಿಗೆ ಕರಗುವನು ಕೃಷ್ಣನು
(೨) ದ್ರೌಪದಿಯನ್ನು ಕರೆದ ಪರಿ – ಕಾಮಿನಿ, ಮಹಿಳೆ