ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರನ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ (ಗದಾ ಪರ್ವ, ೯ ಸಂಧಿ, ೨೮ ಪದ್ಯ)
ತಾತ್ಪರ್ಯ:
ಧೃಷ್ಟದ್ಯುಮ್ನನ ಮಂಚದ ಎರಡೂ ಕಡೆ ದೀಪಗಳು ಬೆಳಗುತ್ತಿದ್ದವು. ಮಂಚದ ಮೇಲೆ ಒಳ್ಲೆಯ ಹಾಸು, ಚಿತ್ರಾವಳಿಯ ಮೇಲ್ಕಟ್ಟು, ನವರತ್ನ ಭೂಷಣಗಳನ್ನು ಧರಿಸಿ ಮಲಗಿದ್ದ ಧೃಷ್ಟದ್ಯುಮ್ನನನ್ನು ಕಂಡು ಪ್ರಳಯಕಾಲದ ಭೈರವನಂತಿದ್ದ ಅಶ್ವತ್ಥಾಮನು ಎಡಗಾಲಿನಿಂದ ಒದೆದನು.
ಅರ್ಥ:
ತೊಳಗು: ಕಾಂತಿ, ಪ್ರಕಾಶ; ಇಕ್ಕೆಲ: ಎರಡೂ ಕಡೆ; ದೀಪ: ಹಣತೆ; ಬೆಳಗು: ಪ್ರಕಾಶ; ಮಣಿ: ಬೆಲೆಬಾಳುವ ರತ್ನ; ಮಣಿರುಚಿ: ಮಣಿಗಳಿಂದ ಅಲಂಕೃತವಾದ; ಚಿತ್ರಾವಳಿ: ಪಟಗಳ ಸಾಲು; ಲಲಿತ: ಚೆಲುವು; ಸ್ತರ: ಪದರ, ವಿಭಾಗ; ಮಧ್ಯ: ನಡುವೆ; ಹೊಳೆ: ಪ್ರಕಾಶ; ನವ: ಒಂಬತ್ತು; ರತ್ನ: ಬೆಲೆಬಾಳುವ ಹರಳು; ಭೂಷಣ: ಅಲಂಕರಿಸುವುದು; ಕಳಿತ: ಪೂರ್ಣ ಹಣ್ಣಾದ; ಕಾಯ: ದೇಹ; ಕಂಡು: ನೋಡು; ರೋಷ: ಕೋಪ; ಪ್ರಳಯ: ನಾಶ, ಹಾಳು; ಭೈರವ: ಶಿವನ ಸ್ವರೂಪ; ರೂಪ: ಆಕಾರ; ಒದೆ: ತಳ್ಳು, ಕಾಲಿನಿಂದ ಹೊಡೆ; ವಾಮ: ಎಡ; ಪಾದ: ಚರಣ;
ಪದವಿಂಗಡಣೆ:
ತೊಳತೊಳಗುವ್+ಇಕ್ಕೆಲದ+ ದೀಪದ
ಬೆಳಗಿನಲಿ +ಮಣಿರುಚಿಯ +ಚಿತ್ರಾ
ವಳಿಯ +ಮೇಲ್ಕಟ್ಟಿನಲಿ +ಲಲಿತ+ಸ್ತರನ +ಮಧ್ಯದಲಿ
ಹೊಳೆಹೊಳೆವ +ನವರತ್ನ+ಭೂಷಣ
ಕಳಿತಕಾಯನ +ಕಂಡು +ರೋಷ
ಪ್ರಳಯ +ಭೈರವರೂಪನ್+ಒದೆದನು +ವಾಮ+ಪಾದದಲಿ
ಅಚ್ಚರಿ:
(೧) ಅಶ್ವತ್ಥಾಮನು ಒದೆದ ಪರಿ – ರೋಷ ಪ್ರಳಯ ಭೈರವರೂಪನೊದೆದನು ವಾಮಪಾದದಲಿ
(೨) ತೊಳಗು, ಹೊಳೆ – ಸಾಮ್ಯಾರ್ಥ ಪದಗಳು
(೩) ಧೃಷ್ಟದ್ಯುಮ್ನನನ್ನು ಕಳಿತಕಾಯ ಎಂದು ಕರೆದುದು
(೪) ತೊಳತೊಳಗು, ಹೊಳೆಹೊಳೆವ – ಪದಗಳ ಬಳಕೆ