ಪದ್ಯ ೩೦: ಅರ್ಜುನನ ಯಾವ ನುಡಿಯಿಂದ ಹಣ್ಣು ಮೇಲೇರಿತು?

ವಾಯುಸುತನ ಸುಭಾಷಿತದ ತರು
ವಾಯಲರ್ಜುನನೆದ್ದು ವಿಪ್ರನಿ
ಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ
ಪ್ರೀಯದೊರೆಕೊಂಬಂತೆ ಕಮಲದ
ಳಾಯತಾಂಬಕ ಸತತ ಕದನೋತ್ಸಾಹ ತನಗೆಂದ (ಅರಣ್ಯ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನ ಹಿತ ನುಡಿಯ ನಂತರ ಅರ್ಜುನನು ಎದ್ದು ನಿಂತು, ಭೋಜನದ ಆಮಂತ್ರಣವನ್ನು ಬ್ರಾಹ್ಮಣರೂ, ಹೊಸಹುಲ್ಲನ್ನು ಗೋವುಗಳು, ಪತಿಯ ಆಗಮನವನ್ನು ಹೆಂಡತಿಯು ಹೇಗೆ ಉತ್ಸಾಹದಿಂದ ಕಾಯುವರೋ ಅದೇ ರೀತಿ ಹೇ ಕೃಷ್ಣ ನಾನು ಯುದ್ಧದಲ್ಲಿ ಅಷ್ಟು ಉತ್ಸುಕನಾಗಿರುತ್ತೇನೆ ಎಂದನು.

ಅರ್ಥ:
ವಾಯು: ಸಮೀರ, ಗಾಳಿ; ಸುತ: ಮಗ; ಸುಭಾಷಿತ: ಹಿತನುಡಿ; ತರುವಾಯ: ನಂತರ; ಎದ್ದು: ಮೇಲೇಳು; ವಿಪ್ರ: ಬ್ರಾಹ್ಮಣ; ನಿಕಾಯ: ಗುಂಪು; ಆಮಂತ್ರಣ: ಆಹ್ವಾನ, ಕರೆ; ನವ: ಹೊಸ; ತೃಣ: ಹುಲ್ಲು; ಗೋಧನ: ಗೋವು; ಆವಳಿ: ಗುಂಪು; ಸ್ತ್ರೀ: ಹೆಂಗಸು; ಪತಿ: ಗಂಡ; ಬರವು: ಆಗಮನ; ಪ್ರೀಯ: ಪ್ರೀತಿಯಿಂದ; ಒರೆ: ಬಳಿ, ನಿರೂಪಿಸು; ಸತತ: ಯಾವಾಗಲೂ; ಕದನ: ಯುದ್ಧ; ಉತ್ಸಾಹ: ಹುರುಪು, ಆಸಕ್ತಿ; ಕಮಲದಳಾಯತ: ಕಮಲದ ಎಲೆಯಂತೆ ವಿಶಾಲವಾದ; ದಳ: ಎಲೆ; ಆಯತ: ವಿಶಾಲ; ಅಂಬಕ: ಕಣ್ಣು;

ಪದವಿಂಗಡಣೆ:
ವಾಯುಸುತನ +ಸುಭಾಷಿತದ+ ತರು
ವಾಯಲ್+ಅರ್ಜುನನ್+ಎದ್ದು +ವಿಪ್ರ+ನಿ
ಕಾಯಕ್+ಆಮಂತ್ರಣವು+ ನವತೃಣ+ ಗೋಧನಾವಳಿಗೆ
ಸ್ತ್ರೀಯರಿಗೆ +ನಿಜಪತಿಯ+ ಬರವಿನ
ಪ್ರೀಯದೊರೆ+ಕೊಂಬಂತೆ +ಕಮಲದ
ಳ+ಆಯತ+ಅಂಬಕ+ ಸತತ +ಕದನ+ಉತ್ಸಾಹ +ತನಗೆಂದ

ಅಚ್ಚರಿ:
(೧) ಶ್ರೀಕೃಷ್ಣನನ್ನು ಕಮಲದಳಾಯತಾಂಬಕ ಎಂದು ಕರೆದಿರುವುದು
(೨) ಅರ್ಜುನನ ಹಿತನುಡಿ: ವಿಪ್ರ ನಿಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ ಪ್ರೀಯದೊರೆಕೊಂಬಂತೆ