ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ (ವಿರಾಟ ಪರ್ವ, ೨ ಸಂಧಿ, ೪೪ ಪದ್ಯ)
ತಾತ್ಪರ್ಯ:
ಕೀರ್ತಿಲತೆಯ ಚಿಗುರು ಬಾಡಿತು, ಮನ್ಮಥನ ಕಾಟದಿಂದ ಆರ್ತನಾಗಿರುವೆ, ವಂಶಕ್ಕೆ ಯಮನಾದೆ, ನಿನ್ನ ವಂಶವನ್ನು ಕೊಂದೆ, ಅರಿವು ತಪ್ಪಿದಎ ಮನುಷ್ಯರಿಗೆ ರಾವಣನಿಗೆ ಬಂದ ಗತಿಯೇ ಬರುತ್ತದೆ, ನಿನ್ನ ಈ ಧೂರ್ತತನಕ್ಕೆ ನಾನು ಹೆದರುತ್ತೇನೆ ಎಂದು ಸುದೇಷ್ಣೆಯು ಹೇಳಿದಳು.
ಅರ್ಥ:
ಕೀರ್ತಿ: ಯಶಸ್ಸು; ಲತೆ: ಬಳ್ಳಿ; ಕುಡಿ: ಚಿಗುರು; ಒಣಗು: ಬಾದು; ಮದನ: ಕಾಮ; ಆರ್ತ: ಕಷ್ಟ, ಸಂಕಟ; ಕುಲ: ವಂಶ; ಕಾಲ: ಯಮ; ಮೂರ್ತಿ: ರೂಪ; ಅವತರಿಸು: ಹುಟ್ಟು; ಸಂಹರಿಸು: ಸಾಯಿಸು; ಕುಲ: ವಂಶ; ಸ್ಫೂರ್ತಿ: ಪ್ರೇರಣೆ; ಮನುಜ: ಮಾನವ; ಆರ್ತಿ: ವ್ಯಥೆ, ಚಿಂತೆ; ಅರಿ: ತಿಳಿ; ಕಡು: ಬಹಳ; ಧೂರ್ತ: ದುಷ್ಟ; ಅಂಜು: ಹೆದರು; ನಡುಗು: ಕಂಪನ; ನಳಿನಾಕ್ಷಿ: ಕಮಲದಂತಹ ಕಣ್ಣುಳ್ಳವಳು;
ಪದವಿಂಗಡಣೆ:
ಕೀರ್ತಿಲತೆ +ಕುಡಿ+ಒಣಗಿತೈ +ಮದನ
ಆರ್ತನಾದೈ+ ಕುಲಕೆ+ ಕಾಲನ
ಮೂರ್ತಿ +ನೀನ್+ಅವತರಿಸಿದೈ +ಸಂಹರಿಸಿದೈ+ ಕುಲವ
ಸ್ಫೂರ್ತಿಗ್+ಎಡೆ +ಮನುಜರಿಗೆ +ರಾವಣನ್
ಆರ್ತಿ+ಅಪ್ಪುದು +ಅರಿಯಲಾ +ಕಡು
ಧೂರ್ತತನಕ್+ಅಂಜುವೆನೆನುತ+ ನಡುಗಿದಳು +ನಳಿನಾಕ್ಷಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಕೀರ್ತಿಲತೆ ಕುಡಿಯೊಣಗಿತೈ, ಕುಲಕೆ ಕಾಲನಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ