ಹಲವು ಯುಗ ಪರಿಯಂತವಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರಸೂಕ್ತದ್ಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನ ಸಂಭವನೆಂಬ ಹೆಸರಾಯ್ತಮ್ದು ಮೊದಲಾಗಿ (ಅರಣ್ಯ ಪರ್ವ, ೧೫ ಸಂಧಿ, ೩೦ ಪದ್ಯ)
ತಾತ್ಪರ್ಯ:
ಬ್ರಹ್ಮನು ವಿಷ್ಣುವಿನ ಹೊಟ್ಟೆಯೊಳ ಹೊಕ್ಕು ಬಹಳ ವರ್ಷಗಳಾಯಿತು, ಅವನು ದಾರಿಕಾಣದೆ, ಕೃಪಾಳುವಾದ ಶ್ರೀ ಹರಿಯನ್ನು ವೇದ ಸಹಸ್ರ ಸೂಕ್ತದಿಂದ ಹೊಗಳಿದನು, ಆಗ ವಿಷ್ಣುವು ಕರುಣೆಯಿಂದ ತನ್ನ ಹೊಕ್ಕಳಿನ ಕಮಲದಿಂದ ಬ್ರಹ್ಮನನ್ನು ಹೊರತೆಗೆದನು. ಅಂದಿನಿಂದ ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರಾಯಿತು.
ಅರ್ಥ:
ಹಲವು: ಬಹಳ; ಯುಗ: ಸಮಯ; ಪರಿಯಂತ: ಕಳೆದು, ಮುಗಿಸು; ತೊಳಲು: ಬವಣೆ, ಸಂಕಟ; ಕಡೆ: ಕೊನೆ; ಕಾಣು: ತೋರು; ಕೃಪಾಳು: ದಯೆತೋರುವ; ಒಲಿ: ಒಪ್ಪು, ಸಮ್ಮತಿಸು; ಹೊಗಳು: ಪ್ರಶಂಶಿಸು; ಅಜ: ಬ್ರಹ್ಮನು; ವೇದ: ಶೃತಿ; ಸಹಸ್ರ: ಸಾವಿರ; ಸೂಕ್ತ: ಹಿತವಚನ; ಬಳಿಕ: ನಂತರ; ಕಾರುಣ್ಯ: ದಯೆ; ನಾಭಿ: ಹೊಕ್ಕಳು; ನಳಿನ: ಕಮಲ; ತೆಗೆ: ಹೊರತರು; ವಿರಿಂಚಿ: ಬ್ರಹ್ಮ; ಸಂಭವ: ಹುಟ್ಟು; ಹೆಸರು: ನಾಮ; ಮೊದಲು: ಮುಂಚೆ;
ಪದವಿಂಗಡಣೆ:
ಹಲವು +ಯುಗ +ಪರಿಯಂತವ್+ಅಲ್ಲಿಯೆ
ತೊಳಲಿ +ಕಡೆ+ಕಾಣದೆ+ ಕೃಪಾಳುವನ್
ಒಲಿದು +ಹೊಗಳಿದನ್+ಅಜನು +ವೇದ +ಸಹಸ್ರ+ಸೂಕ್ತದಲಿ
ಬಳಿಕ +ಕಾರುಣ್ಯದಲಿ +ನಾಭೀ
ನಳಿನದಲಿ +ತೆಗೆದನು +ವಿರಿಂಚಿಗೆ
ನಳಿನ ಸಂಭವನೆಂಬ +ಹೆಸರಾಯ್ತಂದು+ ಮೊದಲಾಗಿ
ಅಚ್ಚರಿ:
(೧) ವಿರಿಂಚಿ, ಅಜ, ನಳಿನಸಂಭವ – ಸಮನಾರ್ಥಕ ಪದಗಳು