ಪದ್ಯ ೩೦: ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರು ಹೇಗೆ ಬಂತು?

ಹಲವು ಯುಗ ಪರಿಯಂತವಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರಸೂಕ್ತದ್ಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನ ಸಂಭವನೆಂಬ ಹೆಸರಾಯ್ತಮ್ದು ಮೊದಲಾಗಿ (ಅರಣ್ಯ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಬ್ರಹ್ಮನು ವಿಷ್ಣುವಿನ ಹೊಟ್ಟೆಯೊಳ ಹೊಕ್ಕು ಬಹಳ ವರ್ಷಗಳಾಯಿತು, ಅವನು ದಾರಿಕಾಣದೆ, ಕೃಪಾಳುವಾದ ಶ್ರೀ ಹರಿಯನ್ನು ವೇದ ಸಹಸ್ರ ಸೂಕ್ತದಿಂದ ಹೊಗಳಿದನು, ಆಗ ವಿಷ್ಣುವು ಕರುಣೆಯಿಂದ ತನ್ನ ಹೊಕ್ಕಳಿನ ಕಮಲದಿಂದ ಬ್ರಹ್ಮನನ್ನು ಹೊರತೆಗೆದನು. ಅಂದಿನಿಂದ ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರಾಯಿತು.

ಅರ್ಥ:
ಹಲವು: ಬಹಳ; ಯುಗ: ಸಮಯ; ಪರಿಯಂತ: ಕಳೆದು, ಮುಗಿಸು; ತೊಳಲು: ಬವಣೆ, ಸಂಕಟ; ಕಡೆ: ಕೊನೆ; ಕಾಣು: ತೋರು; ಕೃಪಾಳು: ದಯೆತೋರುವ; ಒಲಿ: ಒಪ್ಪು, ಸಮ್ಮತಿಸು; ಹೊಗಳು: ಪ್ರಶಂಶಿಸು; ಅಜ: ಬ್ರಹ್ಮನು; ವೇದ: ಶೃತಿ; ಸಹಸ್ರ: ಸಾವಿರ; ಸೂಕ್ತ: ಹಿತವಚನ; ಬಳಿಕ: ನಂತರ; ಕಾರುಣ್ಯ: ದಯೆ; ನಾಭಿ: ಹೊಕ್ಕಳು; ನಳಿನ: ಕಮಲ; ತೆಗೆ: ಹೊರತರು; ವಿರಿಂಚಿ: ಬ್ರಹ್ಮ; ಸಂಭವ: ಹುಟ್ಟು; ಹೆಸರು: ನಾಮ; ಮೊದಲು: ಮುಂಚೆ;

ಪದವಿಂಗಡಣೆ:
ಹಲವು +ಯುಗ +ಪರಿಯಂತವ್+ಅಲ್ಲಿಯೆ
ತೊಳಲಿ +ಕಡೆ+ಕಾಣದೆ+ ಕೃಪಾಳುವನ್
ಒಲಿದು +ಹೊಗಳಿದನ್+ಅಜನು +ವೇದ +ಸಹಸ್ರ+ಸೂಕ್ತದಲಿ
ಬಳಿಕ +ಕಾರುಣ್ಯದಲಿ +ನಾಭೀ
ನಳಿನದಲಿ +ತೆಗೆದನು +ವಿರಿಂಚಿಗೆ
ನಳಿನ ಸಂಭವನೆಂಬ +ಹೆಸರಾಯ್ತಂದು+ ಮೊದಲಾಗಿ

ಅಚ್ಚರಿ:
(೧) ವಿರಿಂಚಿ, ಅಜ, ನಳಿನಸಂಭವ – ಸಮನಾರ್ಥಕ ಪದಗಳು