ಪದ್ಯ ೨೩: ಶ್ರೀಕೃಷ್ಣನು ಯಾವ ರೀತಿ ನಟಿಸಿದನು?

ದೇಶದಲಿ ಕಾಲದಲಿ ದೆಸೆಯಲಿ
ರಾಶಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹೂಳಿದು ನಿಜೋನ್ನತಿಯ (ಸಭಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದೇಶ, ಕಾಲ ದಿಕ್ಕು, ರಾಶಿ, ನಕ್ಷತ್ರ, ಗ್ರಹ ಇವೆಲ್ಲವುಗಳ ಚೇಷ್ಟೆಗೂ ತಾನೇ ಕಾರಣನಾದರೂ ಮನುಷ್ಯನಾಗಿ ಹುಟ್ಟಿ ಲೋಕದ ವರ್ತನೆಗನುಸಾರವಾಗಿ ನಡೆಯುತ್ತಾ ತನ್ನ ವೇಷಕ್ಕನುಗುಣವಾಗಿ ನಟಿಸಿದನು. ತನ್ನ ಹಿರಿಮೆಯನ್ನು ಹುದುಗಿಸಿಟ್ಟನು.

ಅರ್ಥ:
ದೇಶ: ರಾಷ್ಟ್ರ; ಕಾಲ: ಸಮಯ; ದೆಸೆ: ದಿಕ್ಕು; ರಾಶಿ: ನಕ್ಷತ್ರಗಳ ೧೨ ಗುಂಪುಗಳು; ತಾರ: ನಕ್ಷತ್ರ; ಗ್ರಹ: ಆಕಾಶಚರಗಳು; ಐಸು: ಅಷ್ಟು; ಚೇಷ್ಟೆ: ಚೆಲ್ಲಾಟ, ಸರಸ; ವರ್ತನ: ನಡವಳಿಕೆ, ನಡತೆ; ಈಸು: ಇಷ್ಟು; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಮರೆಸು: ಮರೆಯುವಂತೆ ಮಾಡು; ಲೋಕ: ಜಗತ್ತು; ವಿಲಾಸ: ಅಂದ, ಸೊಬಗು; ಅನುಸರಿಸು: ಕೂಡಿಸು; ಹಿಂಬಾಲಿಸು; ನರ: ಮನುಷ್ಯ; ವೇಷ: ಉಡುಗೆ ತೊಡುಗೆ; ನಟಿಸು: ಅಭಿನಯಿಸು; ಹೂಳು: ಹೂತು ಹಾಕು; ನಿಜ: ದಿಟ; ಉನ್ನತಿ: ಅಭ್ಯುದಯ, ಏಳಿಗೆ;

ಪದವಿಂಗಡಣೆ:
ದೇಶದಲಿ +ಕಾಲದಲಿ +ದೆಸೆಯಲಿ
ರಾಶಿಯಲಿ +ತಾರಾಗ್ರಹಾದಿಗಳ್
ಐಸರಲಿ +ತಾ +ತನ್ನ +ಚೇಷ್ಟೆಗಳ್+ಇವರ+ ವರ್ತನಕೆ
ಈಸು+ ಮಹಿಮೆಯ +ಮರೆಸಿ +ಲೋಕ+ವಿ
ಳಾಸ+ ಚೇಷ್ಟೆಯನ್+ಅನುಸರಿಸಿ+ ನರ
ವೇಷವನು+ ನಟಿಸಿದನು +ಹೂಳಿದು +ನಿಜೋನ್ನತಿಯ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ತಿಳಿಸುವ ವಾಕ್ಯ – ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದನು ಹೂಳಿದು ನಿಜೋನ್ನತಿಯ