ಚರಣದುಂಗುಟದಲ್ಲಿ ದೇವರು
ತುರುಗಿದರು ನೊಸಲಿನೊಳು ಕಮಲಜ
ನುರದೊಳಗ್ಗದ ರುದ್ರನಾಸ್ಯದೊಳಗ್ನಿ ವಾಯುಗಳು
ಬೆರಳೊಳಿಂದ್ರಾದಿಗಳು ನಯನಾಂ
ಬುರುಹದೊಳು ರವಿ ನಾಭಿಯೊಳು
ವರಭುಜಾಗ್ರದೊಳಖಿಳ ದಿಕ್ಪಾಲಕರು ರಂಜಿಸಿತು (ಉದ್ಯೋಗ ಪರ್ವ, ೧೦ ಸಂಧಿ, ೨೭ ಪದ್ಯ)
ತಾತ್ಪರ್ಯ:
ಕೃಷ್ಣನ ಪಾದಗಳ ಅಂಗುಷ್ಟದಲ್ಲಿ ದೇವತೆಗಳ ಸಮೂಹವು ಸೇರಿತ್ತು, ಹಣೆಯಲ್ಲಿ ಬ್ರಹ್ಮನೂ, ಎದೆಯಲ್ಲಿ ರುದ್ರನು, ಮುಖದಲ್ಲಿ ಅಗ್ನಿ, ವಾಯುಗಳೂ, ಬೆರಳುಗಳಲ್ಲಿ ಇಂದ್ರನೇ ಮೊದಲಾದವರೂ, ಕಣ್ಣಿನಲ್ಲಿ ಸೂರ್ಯನೂ, ನಾಭಿಯಲ್ಲಿ ಭುಜದಲ್ಲಿ ಅಷ್ಟದಿಕ್ಪಾಲಕರು ರಾರಾಜಿಸುತ್ತಿದ್ದರು.
ಅರ್ಥ:
ಚರಣ: ಪಾದ; ಅಂಗುಟ: ಅಂಗುಷ್ಟ, ಹಿರಿಬೆರಳು; ದೇವ: ಭಗವಂತ; ತುರುಗು: ಸಂದಣಿ, ದಟ್ಟಣೆ; ನೊಸಲು: ಹಣೆ, ಲಲಾಟ; ಕಮಲಜ: ಬ್ರಹ್ಮ; ಕಮಲ: ತಾವರೆ; ಉರ: ಎದೆ, ವಕ್ಷಸ್ಥಳ; ಅಗ್ಗ: ಶ್ರೇಷ್ಠ; ರುದ್ರ: ಶಿವ; ಆಸ್ಯ: ಮುಖ, ಬಾಯಿ; ಅಗ್ನಿ: ಬೆಂಕಿ; ವಾಯು: ಗಾಳಿ, ಅನಿಲ; ಬೆರಳು: ಅಂಗುಲಿ; ಇಂದ್ರ: ಶಕ್ರ; ಆದಿ: ಮೊದಲಾದ; ನಯನ: ಕಣ್ಣು; ಅಂಬುರುಹ: ಕಮಲ; ರವಿ: ಭಾನು; ನಾಭಿ: ಹೊಕ್ಕಳು; ವರ: ಶ್ರೇಷ್ಠ; ಭುಜ: ತೋಳು, ಬಾಹು; ಅಗ್ರ: ತುದಿ; ಅಖಿಲ: ಎಲ್ಲಾ; ದಿಕ್ಕು: ದೆಸೆ; ಪಾಲಕ: ಒಡೆಯ; ರಂಜಿಸು: ಶೋಭಿಸು;
ಪದವಿಂಗಡಣೆ:
ಚರಣದ್+ಉಂಗುಟದಲ್ಲಿ +ದೇವರು
ತುರುಗಿದರು +ನೊಸಲಿನೊಳು +ಕಮಲಜನ್
ಉರದೊಳ್+ಅಗ್ಗದ +ರುದ್ರನ್+ಆಸ್ಯದೊಳ್+ಅಗ್ನಿ+ ವಾಯುಗಳು
ಬೆರಳೊಳ್+ಇಂದ್ರಾದಿಗಳು +ನಯನ
ಅಂಬುರುಹದೊಳು +ರವಿ+ ನಾಭಿಯೊಳು
ವರಭುಜಾಗ್ರದೊಳ್+ಅಖಿಳ+ ದಿಕ್ಪಾಲಕರು +ರಂಜಿಸಿತು
ಅಚ್ಚರಿ:
(೧) ವಿಶ್ವರೂಪದಲ್ಲಿ ಕಂಡ ದೇವಾನುದೇವತೆಗಳ ವಿವರ ನೀಡುವ ಪದ್ಯ
(೨) ಕಮಲ, ಅಂಬುರುಹ – ಸಮನಾರ್ಥಕ ಪದ
(೩) ಆಸ್ಯ, ನಾಭಿ, ನಯನ, ಉಂಗುಷ್ಟ, ನೊಸಲು, ಉರ, ಬೆರಳು, ಭುಜ – ದೇಹದ ಭಾಗಗಳನ್ನು ಹೆಸರಿಸುವ ಪದ್ಯ