ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೩ ಪದ್ಯ)
ತಾತ್ಪರ್ಯ:
ಕರ್ಣನು ನಕುಲ, ಸಹದೇವ, ಸಾತ್ಯಕಿ, ಯುಧಿಷ್ಠಿರರ ಮೇಲೆ ದಾಳಿ ಮಾಡುತ್ತಿದುದನ್ನು ನೋಡಿದ ಶಲ್ಯನು ಅಯ್ಯೋ, ಕರ್ಣ ಇವರೆಲ್ಲರೂ ನೀತಿವಂತರು, ಕುಟಿಲತೆಯನ್ನರಿಯದವರು, ಧರ್ಮಮಾರ್ಗದಲ್ಲಿ ನಡೆಯುವವರು, ಇವರನ್ನು ಕೊಲ್ಲಬೇಡ, ಭೀಮಾರ್ಜುನರಿಬ್ಬರೇ ನಮಗೆ ಬಾಧಕರು, ಅವರನ್ನು ಸಂಹರಿಸು ಎಂದು ಕರ್ಣನಿಗೆ ಶಲ್ಯನು ಹೇಳಿದನು
ಅರ್ಥ:
ಅಕಟಕಟ: ಅಯ್ಯೋ; ನರೇಶ: ರಾಜ; ಅಕುಟಿಲ: ಸಾತ್ವಿಕರು, ಕುಟಿಲತೆಯನ್ನರಿಯದವರು; ನಯ: ಶಾಸ್ತ್ರ, ಮೃದುತ್ವ; ಕೋವಿದ; ಪಂಡಿತ; ಧಾರ್ಮಿಕ: ಧರ್ಮ ಮಾರ್ಗಿಗಳು; ಕೊಲು: ಸಾಯಿಸು; ಅತಿ: ಬಹಳ; ಬಾಧಕ: ತೊಂದರೆ; ಸಂಹರಿಸು: ಸಾಯಿಸು;
ಪದವಿಂಗಡಣೆ:
ಅಕಟಕಟ +ರಾಧೇಯ +ಕೇಳ್+ ಈ
ನಕುಳನ್+ಈ+ ಸಹದೇವನ್+ಈ+ ಸಾ
ತ್ಯಕಿ +ನರೇಶ್ವರರ್+ಎನಿಸುವ್+ಈ+ ಕುಂತೀ+ಕುಮಾರಕರು
ಅಕುಟಿಲರು+ ನಯಕೋವಿದರು +ಧಾ
ರ್ಮಿಕರ+ ಕೊಲಬೇಡಿವರನ್+ಅತಿ+ ಬಾ
ಧಕರು +ಭೀಮಾರ್ಜುನರ +ಸಂಹರಿಸೆಂದನಾ +ಶಲ್ಯ
ಅಚ್ಚರಿ:
(೧) ಅಕುಟಿಲ, ನಯಕೋವಿದ, ಧಾರ್ಮಿಕ – ಗುಣಗಾನ ಪದಗಳು