ಪದ್ಯ ೪೩: ಶಲ್ಯನು ಕರ್ಣನಿಗೆ ಯಾರನ್ನು ಕೊಲ್ಲಲು ಹೇಳಿದನು?

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನು ನಕುಲ, ಸಹದೇವ, ಸಾತ್ಯಕಿ, ಯುಧಿಷ್ಠಿರರ ಮೇಲೆ ದಾಳಿ ಮಾಡುತ್ತಿದುದನ್ನು ನೋಡಿದ ಶಲ್ಯನು ಅಯ್ಯೋ, ಕರ್ಣ ಇವರೆಲ್ಲರೂ ನೀತಿವಂತರು, ಕುಟಿಲತೆಯನ್ನರಿಯದವರು, ಧರ್ಮಮಾರ್ಗದಲ್ಲಿ ನಡೆಯುವವರು, ಇವರನ್ನು ಕೊಲ್ಲಬೇಡ, ಭೀಮಾರ್ಜುನರಿಬ್ಬರೇ ನಮಗೆ ಬಾಧಕರು, ಅವರನ್ನು ಸಂಹರಿಸು ಎಂದು ಕರ್ಣನಿಗೆ ಶಲ್ಯನು ಹೇಳಿದನು

ಅರ್ಥ:
ಅಕಟಕಟ: ಅಯ್ಯೋ; ನರೇಶ: ರಾಜ; ಅಕುಟಿಲ: ಸಾತ್ವಿಕರು, ಕುಟಿಲತೆಯನ್ನರಿಯದವರು; ನಯ: ಶಾಸ್ತ್ರ, ಮೃದುತ್ವ; ಕೋವಿದ; ಪಂಡಿತ; ಧಾರ್ಮಿಕ: ಧರ್ಮ ಮಾರ್ಗಿಗಳು; ಕೊಲು: ಸಾಯಿಸು; ಅತಿ: ಬಹಳ; ಬಾಧಕ: ತೊಂದರೆ; ಸಂಹರಿಸು: ಸಾಯಿಸು;

ಪದವಿಂಗಡಣೆ:
ಅಕಟಕಟ +ರಾಧೇಯ +ಕೇಳ್+ ಈ
ನಕುಳನ್+ಈ+ ಸಹದೇವನ್+ಈ+ ಸಾ
ತ್ಯಕಿ +ನರೇಶ್ವರರ್+ಎನಿಸುವ್+ಈ+ ಕುಂತೀ+ಕುಮಾರಕರು
ಅಕುಟಿಲರು+ ನಯಕೋವಿದರು +ಧಾ
ರ್ಮಿಕರ+ ಕೊಲಬೇಡಿವರನ್+ಅತಿ+ ಬಾ
ಧಕರು +ಭೀಮಾರ್ಜುನರ +ಸಂಹರಿಸೆಂದನಾ +ಶಲ್ಯ

ಅಚ್ಚರಿ:
(೧) ಅಕುಟಿಲ, ನಯಕೋವಿದ, ಧಾರ್ಮಿಕ – ಗುಣಗಾನ ಪದಗಳು