ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರ ಸ
ಮಾನ ಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ (ಭೀಷ್ಮ ಪರ್ವ, ೧ ಸಂಧಿ, ೩೩ ಪದ್ಯ)
ತಾತ್ಪರ್ಯ:
ಕೌರವನು ಬಹಳ ಸಂತಸಪಟ್ಟು ಅತಿರೇಕದಿಂದ, ಭೀಷ್ಮನ ಬಲವಿರುವ ನಮ್ಮ ಸೈನ್ಯವು ಶಿವನಿಗೂ ಬೆದರುವುದಿಲ್ಲ. ಪಾಂಡವರು ಅರಣ್ಯ ಜಪದಲ್ಲೇ ಇರಬೇಕು, ಅವರಿಗೆ ರಾಜ್ಯವೇಕೆ ಭೀಷ್ಮನಿಗೆ ಸರಿಸಮಾನರಾದ ವೀರರು ಇನ್ನಾರು ಎಂದು ಹೊಗಳಿದನು.
ಅರ್ಥ:
ನದೀನಂದನ: ಭೀಷ್ಮ; ನಂದನ: ಮಗ; ಬಲ: ಸಾಮರ್ಥ್ಯ; ಸೇನೆ: ಸೈನ್ಯ; ಶಿವ: ಶಂಕರ; ಅಂಜು: ಹೆದರು; ಸೂನು: ಮಕ್ಕಳು; ಅರಣ್ಯ: ಕಾನನ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಇಳೆ: ಭೂಮಿ; ಮಾನನಿಧಿ: ಮರ್ಯಾದೆಯನ್ನೇ ಐಶ್ವರ್ಯವನ್ನಾಗಿಸಿದವ (ದುರ್ಯೋಧನ); ಸಮರ: ಯುದ್ಧ; ಸಮಾನ: ಸದೃಶ; ಭಟ: ವೀರ; ಮನ: ಮನಸ್ಸು; ಅನುರಾಗ: ಪ್ರೀತಿ; ಬಣ್ಣಿಸು: ಹೊಗಳು, ವರ್ಣಿಸು;
ಪದವಿಂಗಡಣೆ:
ಈ +ನದೀನಂದನನ +ಬಲದಲಿ
ಸೇನೆ +ಶಿವಗ್+ಅಂಜುವುದೆ +ಕುಂತೀ
ಸೂನುಗಳಿಗ್+ಅರಣ್ಯ+ಜಪವ್+ಇನ್ನವರಿಗ್+ಇಳೆ+ಏಕೆ
ಮಾನನಿಧಿ +ಭೀಷ್ಮಂಗೆ +ಸಮರ +ಸ
ಮಾನ +ಭಟನ್+ಇನ್ನಾವನೆಂದು +ಮ
ನೋನುರಾಗದ+ ಮೇಲೆ +ಕೌರವರಾಯ+ ಬಣ್ಣಿಸಿದ
ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿತವಾದುದು – ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
(೨) ಮಾನ, ಸಮಾನ – ಪ್ರಾಸ ಪದಗಳು
(೩) ಮಾನನಿಧಿ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ