ಅರಸ ಕೇಳೈ ಕೌರವೇಂದ್ರನ
ನರಸುತರ್ಜುನಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಯೇಷ ಕೌರವನೃಪಚತುರ್ಬಲವ (ಗದಾ ಪರ್ವ, ೧ ಸಂಧಿ, ೬೮ ಪದ್ಯ)
ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದುರ್ಯೋಧನನನ್ನು ಹುಡುಕುತ್ತಾ ಭೀಮ, ಅರ್ಜುನ, ಸಾತ್ಯಕಿ, ಧರ್ಮಜ ಸಹದೇವ ನಕುಲರು ರಣರಂಗದ ಎಲ್ಲೆಡೆಯಲ್ಲೂ ತಿರುಗಾಡಿದರು. ಇತ್ತ ಒಟ್ಟಾದ ಕುರುಸೇನೆಯನ್ನು ಧೃಷ್ಟಧ್ಯುಮ್ನ, ಸೃಂಜಯರು ನಿಶ್ಯೇಷವಾಗಿ ಸಂಹರಿಸಿದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಅರಸು: ಹುಡುಕು; ಧರಣಿಪತಿ: ರಾಜ; ಕಳ: ರಣರಂಗ; ತಿರುಗು: ಸುತ್ತಾಡು; ಬಳಿಕ: ನಂತರ; ಮೋಹರ: ಯುದ್ಧ; ಒರಸು: ನಾಶಮಾಡು; ನಿಶ್ಯೇಷ: ಕೊನೆಯಿಲ್ಲದ; ನೃಪ: ರಾಜ; ಚತುರ್ಬಲ: ಚದುರಂಗ ಸೈನ್ಯ;
ಪದವಿಂಗಡಣೆ:
ಅರಸ +ಕೇಳೈ +ಕೌರವೇಂದ್ರನನ್
ಅರಸುತ್+ಅರ್ಜುನ+ಭೀಮ +ಸಾತ್ಯಕಿ
ಧರಣಿಪತಿ +ಸಹದೇವ +ನಕುಲರು +ಕೂಡೆ +ಕಳನೊಳಗೆ
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರವ +ಧೃಷ್ಟದ್ಯುಮ್ನ +ಸೃಂಜಯರ್
ಒರಸಿದರು +ನಿಶ್ಯೇಷ +ಕೌರವ+ನೃಪ+ಚತುರ್ಬಲವ
ಅಚ್ಚರಿ:
(೧) ಅರಸ, ಧರಣಿಪತಿ – ಸಮಾನಾರ್ಥಕ ಪದ