ತರುಣಿ ಬಿಡು ಸಾರೆನುತ ಪವನಜ್
ಸರಿದನತ್ತಲು ದ್ರುಪದ ನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದಳವರೊಡನೆ (ವಿರಾಟ ಪರ್ವ, ೩ ಸಂಧಿ, ೯೪ ಪದ್ಯ)
ತಾತ್ಪರ್ಯ:
ದ್ರೌಪದಿ, ನನ್ನನ್ನು ಬಿಡು, ಹೋಗು, ಎಂದು ಭೀಮನು ಹೊರಟು ಹೋದನು. ದ್ರೌಪದಿಯು ಕಾವಲಿನವರನ್ನು ಕರೆದು, ಈ ದುಷ್ಟನು ನನ್ನನ್ನು ಎಳೆದುದರಿಂದ ನನ್ನ ಪತಿಗಳಾದ ಗಂಧರ್ವರು ಕೆರಳಿ ಇವನನ್ನು ಕೊಂದರು ನೋಡಿ ಎಂದು ಕೀಚಕನ ಮೃತ ದೇಹವನ್ನು ತೋರಿಸಿದಳು.
ಅರ್ಥ:
ತರುಣಿ: ಹೆಣ್ಣು; ಬಿಡು: ತೊರೆ; ಸಾರು: ಹತ್ತಿರಕ್ಕೆ ಬರು; ಪವನಜ: ವಾಯು ಪುತ್ರ; ಸರಿ: ದೂರ ಹೋಗು; ನಂದನೆ: ಮಗಳು; ಕರೆ: ಬರೆಮಾಡು; ನುಡಿ: ಮಾತು; ಕಾಹಿ: ರಕ್ಷಿಸುವ; ಹದ: ಸ್ಥಿತಿ; ದುರುಳ: ದುಷ್ಟ; ಬಲು: ಬಲ, ಶಕ್ತಿ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೆರಳು: ಕೋಪಗೊಳ್ಳು; ಹರುವ: ನಾಶ, ಕೊನೆ; ಕಂಡು: ನೋಡು; ಹರಿ: ಪ್ರವಹಿಸು, ಹೇಳು;
ಪದವಿಂಗಡಣೆ:
ತರುಣಿ+ ಬಿಡು +ಸಾರೆನುತ+ ಪವನಜ
ಸರಿದನ್+ಅತ್ತಲು +ದ್ರುಪದ+ ನಂದನೆ
ಕರೆದು+ ನುಡಿದಳು +ಕಾಹಿನವರಿಗೆ+ ಕೀಚಕನ +ಹದನ
ದುರುಳ +ಬಲುಹಿಂದ್+ಎನ್ನನ್+ಎಳೆದೊಡೆ
ಕೆರಳಿದರು +ಗಂಧರ್ವರ್+ಈತಗೆ
ಹರುವ+ ಕಂಡರು +ನೋಡಿ+ಎನೆ +ಹರಿತಂದಳ್+ಅವರೊಡನೆ
ಅಚ್ಚರಿ:
(೧) ತರುಣಿ, ದ್ರುಪದ ನಂದನೆ – ದ್ರೌಪದಿಯನ್ನು ಕರೆದ ಪರಿ