ಮೇಲು ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದುದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ (ದ್ರೋಣ ಪರ್ವ, ೧೯ ಸಂಧಿ, ೧೯ ಪದ್ಯ)
ತಾತ್ಪರ್ಯ:
ನಾರಾಯಣಾಸ್ತ್ರದ ಪ್ರಭಾವದಿಂದ ಮೇಲಿನ ಏಳುಲೋಕಗಳು ಧ್ರುವ ನಕ್ಷತ್ರಕ್ಕೆ ಹೋದವು. ಗ್ರಹಗಳ ನಕ್ಷತ್ರಗಳ ನೆಲೆಯುತಪ್ಪಿ ಜ್ಯೋತಿಷ್ಯರ ಲೆಕ್ಕಾಚಾರ ಸುಳ್ಳಾಯಿತು. ಝಳದ ದಾಳಿಗೆ ಕೆಳಲೋಕಗಳು ಪಾತಾಳಕ್ಕೆ ಕುಸಿದವು. ಬ್ರಹ್ಮಾಂಡದ ಮೇಲಿನ ಆವರಣದ ನೀರು ಕುದಿಯಿತು.
ಅರ್ಥ:
ಜಗ: ಪ್ರಪಂಚ; ಓಡು: ಧಾವಿಸು; ಆಲಯ: ಮನೆ; ನೆಲೆ: ಭೂಮಿ; ಅಪ್ಪು: ಆಲಂಗಿಸು; ತಾರ: ನಕ್ಷತ್ರ; ಜೋಯಿಸ: ಜೋತಿಷಿ; ಹುಸಿ: ಸುಳ್ಳು; ಧಾಳಿ: ಆಕ್ರಮಣ; ಸೆಗಳಿಕೆ: ಕಾವು; ತಳ: ನೆಲ, ಭೂಮಿ; ಪಾತಾಳ: ಅಧೋಲೋಕ; ಅದ್ದು: ತೋಯು; ಕಮಲಜಾಂಡ: ಬ್ರಹ್ಮಾಂಡ; ಆವರಣ: ಮುಸುಕು, ಹೊದಿಕೆ; ಅಂಬು: ನೀರು; ಕುದಿ: ಶಾಖದಿಂದ ಉಕ್ಕು;
ಪದವಿಂಗಡಣೆ:
ಮೇಲು +ಜಗವೇಳ್+ಓಡಿದವು +ಧ್ರುವನ
ಆಲಯಕೆ +ನೆಲೆ+ತಪ್ಪಿದುದು +ಗ್ರಹ
ಮಾಲೆ +ತಾರಾರಾಸಿ +ಜೋಯಿಸರ್+ಓದು +ಹುಸಿಯಾಯ್ತು
ಧಾಳಿಡುವ +ಸೆಗಳಿಯಲಿ +ತಳ +ಪಾ
ತಾಳಕ್+ಅದ್ದುದು +ಕಮಲಜಾಂಡದ
ಮೇಲಣ+ಆವರಣ+ಅಂಬು +ಕುದಿದುದು +ಹೇಳಲೇನೆಂದ
ಅಚ್ಚರಿ:
(೧) ರೂಪಕದ ಪ್ರಯೋಗ – ಗ್ರಹಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು