ಪದ್ಯ ೮೭: ಧರ್ಮಜನ ಗುಣವನ್ನು ಭೀಷ್ಮರು ಹೇಗೆ ಹೊಗಳಿದರು?

ಅಳಿಯದಂತಿರೆ ಸತ್ಯ ಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ
ಹಳವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪನಿ
ರ್ಮಳದೊಳಿದ್ದರೆ ನಿಮಗೆ ಸದರವೆಯೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೭ ಪದ್ಯ)

ತಾತ್ಪರ್ಯ:
ಸತ್ಯವು ನಾಶವಾಗದೆ, ಧರ್ಮದ ನೆರಳು ಬಾಡದೆ, ಕೀರ್ತಿ ಕಾಂತೆಯ ಸುಳಿವಿಗೆ ಅಡ್ಡಿಯಾಗದೆ, ಧೈರ್ಯವೆಂಬ ಕಲ್ಪವೃಕ್ಷದ ಇಗುರು ಬಾಡದೆ, ಅಪಮಾನಕ್ಕೆ ಬೆದರದೆ, ಅರಿಷಡ್ವರ್ಗಗಳ ಆಕ್ರಮಣಕ್ಕೆ ಒಳಗಾಗದೆ, ಧರ್ಮಜನು ನಿರ್ಮಲನಾಗಿದ್ದರೆ ನಿನಗೆ ಅದು ಸದರವಾಯಿತೋ ಎಂದು ಭೀಷ್ಮರು ದುರ್ಯೋಧನನನ್ನು ಕೇಳಿದರು.

ಅರ್ಥ:
ಅಳಿ: ನಾಶ; ಸತ್ಯ: ನಿಜ; ಧರ್ಮ: ಧಾರಣೆ ಮಾಡಿದುದು, ನಿಯಮ; ನೆಳಲು: ನೆರಳು; ನೆಗ್ಗು: ಕುಗ್ಗು, ಕುಸಿ; ಕೀರ್ತಿ: ಖ್ಯಾತಿ; ವಧು: ಹೆಣ್ಣು; ಸುಳಿವು: ಚಿಹ್ನೆ, ಗುರುತು; ನೋಯದೆ: ಪೆಟ್ಟು ತಿನ್ನದೆ; ತಳಿರು: ಚಿಗುರು; ಬಾಡು: ಕಳೆಗುಂದು, ಒಣಗು; ಧೈರ್ಯ: ದಿಟ್ಟತನ; ಸುರ: ದೇವತೆ; ಕುಜ: ಮರ; ಸುರಕುಜ: ದೇವಮರ, ಕಲ್ಪವೃಕ್ಷ; ಹಳವಿಗೆ: ಅಭಿಮಾನ; ಅಳುಕು: ಹೆದರು; ವೈರಿ: ಶತ್ರು; ವರ್ಗ: ಗುಂಪು; ಕಳಕಳ: ಗೊಂದಲ; ಮೈಗೊಡು: ಒಳಗಾಗು; ನೃಪ: ರಾಜ; ನಿರ್ಮಳ: ಶುದ್ಧ; ಸದರ: ಸಲಿಗೆ, ಸುಲಭ;

ಪದವಿಂಗಡಣೆ:
ಅಳಿಯದಂತಿರೆ +ಸತ್ಯ +ಧರ್ಮದ
ನೆಳಲು+ ನೆಗ್ಗದೆ+ ಕೀರ್ತಿವಧುವಿನ
ಸುಳಿವು +ನೋಯದೆ +ತಳಿರು +ಬಾಡದೆ +ಧೈರ್ಯ+ಸುರಕುಜದ
ಹಳವಿಗ್+ಅಳುಕದೆ +ವೈರಿ+ವರ್ಗದ
ಕಳಕಳಕೆ+ ಮೈಗೊಡದೆ +ನೃಪ+ನಿ
ರ್ಮಳದೊಳ್+ಇದ್ದರೆ +ನಿಮಗೆ +ಸದರವೆ+ಎಂದನಾ +ಭೀಷ್ಮ

ಅಚ್ಚರಿ:
(೧) ಧರ್ಮಜನ ಗುಣಗಾನದಲ್ಲಿ ಉಪಮಾನಗಳ ಪ್ರಯೋಗ – ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ