ಅಳಿಯದಂತಿರೆ ಸತ್ಯ ಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ
ಹಳವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪನಿ
ರ್ಮಳದೊಳಿದ್ದರೆ ನಿಮಗೆ ಸದರವೆಯೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೭ ಪದ್ಯ)
ತಾತ್ಪರ್ಯ:
ಸತ್ಯವು ನಾಶವಾಗದೆ, ಧರ್ಮದ ನೆರಳು ಬಾಡದೆ, ಕೀರ್ತಿ ಕಾಂತೆಯ ಸುಳಿವಿಗೆ ಅಡ್ಡಿಯಾಗದೆ, ಧೈರ್ಯವೆಂಬ ಕಲ್ಪವೃಕ್ಷದ ಇಗುರು ಬಾಡದೆ, ಅಪಮಾನಕ್ಕೆ ಬೆದರದೆ, ಅರಿಷಡ್ವರ್ಗಗಳ ಆಕ್ರಮಣಕ್ಕೆ ಒಳಗಾಗದೆ, ಧರ್ಮಜನು ನಿರ್ಮಲನಾಗಿದ್ದರೆ ನಿನಗೆ ಅದು ಸದರವಾಯಿತೋ ಎಂದು ಭೀಷ್ಮರು ದುರ್ಯೋಧನನನ್ನು ಕೇಳಿದರು.
ಅರ್ಥ:
ಅಳಿ: ನಾಶ; ಸತ್ಯ: ನಿಜ; ಧರ್ಮ: ಧಾರಣೆ ಮಾಡಿದುದು, ನಿಯಮ; ನೆಳಲು: ನೆರಳು; ನೆಗ್ಗು: ಕುಗ್ಗು, ಕುಸಿ; ಕೀರ್ತಿ: ಖ್ಯಾತಿ; ವಧು: ಹೆಣ್ಣು; ಸುಳಿವು: ಚಿಹ್ನೆ, ಗುರುತು; ನೋಯದೆ: ಪೆಟ್ಟು ತಿನ್ನದೆ; ತಳಿರು: ಚಿಗುರು; ಬಾಡು: ಕಳೆಗುಂದು, ಒಣಗು; ಧೈರ್ಯ: ದಿಟ್ಟತನ; ಸುರ: ದೇವತೆ; ಕುಜ: ಮರ; ಸುರಕುಜ: ದೇವಮರ, ಕಲ್ಪವೃಕ್ಷ; ಹಳವಿಗೆ: ಅಭಿಮಾನ; ಅಳುಕು: ಹೆದರು; ವೈರಿ: ಶತ್ರು; ವರ್ಗ: ಗುಂಪು; ಕಳಕಳ: ಗೊಂದಲ; ಮೈಗೊಡು: ಒಳಗಾಗು; ನೃಪ: ರಾಜ; ನಿರ್ಮಳ: ಶುದ್ಧ; ಸದರ: ಸಲಿಗೆ, ಸುಲಭ;
ಪದವಿಂಗಡಣೆ:
ಅಳಿಯದಂತಿರೆ +ಸತ್ಯ +ಧರ್ಮದ
ನೆಳಲು+ ನೆಗ್ಗದೆ+ ಕೀರ್ತಿವಧುವಿನ
ಸುಳಿವು +ನೋಯದೆ +ತಳಿರು +ಬಾಡದೆ +ಧೈರ್ಯ+ಸುರಕುಜದ
ಹಳವಿಗ್+ಅಳುಕದೆ +ವೈರಿ+ವರ್ಗದ
ಕಳಕಳಕೆ+ ಮೈಗೊಡದೆ +ನೃಪ+ನಿ
ರ್ಮಳದೊಳ್+ಇದ್ದರೆ +ನಿಮಗೆ +ಸದರವೆ+ಎಂದನಾ +ಭೀಷ್ಮ
ಅಚ್ಚರಿ:
(೧) ಧರ್ಮಜನ ಗುಣಗಾನದಲ್ಲಿ ಉಪಮಾನಗಳ ಪ್ರಯೋಗ – ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ