ಕೇಶಿ ಧೇನುಕ ವತ್ಸಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಸಿಯಾದುದು ದಂತಿ ಮಲ್ಲರ
ದೇಸುಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜಕನ್ನೆಯರೊಡನೆ ಜೋಡಿಸಿದ (ಸಭಾ ಪರ್ವ, ೧೦ ಸಂಧಿ, ೫೭ ಪದ್ಯ)
ತಾತ್ಪರ್ಯ:
ಕೇಶಿ, ಧೇನುಕ, ವತ್ಸ, ಪ್ರಲಂಬ, ಬಕಾಸುರ, ತೃಣಾಅರ್ತ, ಅಘ ಎನ್ನುವ ಅನೇಕ ರಾಕ್ಷಸರನ್ನು ಬಾಲಲೀಲೆಯಿಂದ ಸಂಹರಿಸಿದನು. ಇವನ ಮೇಲೆ ಬಂದ ಕುವಲಯಾಪೀಡವೆಂಬ ಆನೆಯು ಸತ್ತುಹೋಯಿತು. ಚಾಣೂರ ಮುಷ್ಟಿಕರೆಂಬ ಜಟ್ಟಿಗಳನ್ನು ಇವನು ನಿರಾಯಾಸವಾಗಿ ಸಂಹರಿಸಿದನು. ಇವನು ಮಾವನಾದ ಕಂಸನನ್ನು ಸಂಹರಿಸಿ ಸದಾ ಕನ್ಯೆಯರಾಗಿರುವ ಸ್ವರ್ಗದ ಅಪ್ಸರೆಯರಿಗೆ ಜೊತೆಮಾಡಿದ.
ಅರ್ಥ:
ಸಮರ್ಥ: ಬಲಶಾಲಿ, ಗಟ್ಟಿಗ; ಸೀಳು: ಮುರಿ; ಬಿಸುಟು: ಹೊರಹಾಕು; ಬಾಲ: ಬಾಲ್ಯ; ಕೇಳಿ: ಕ್ರೀಡೆ, ವಿನೋದ; ಗಾಸಿ:ತೊಂದರೆ, ಹಿಂಸೆ; ಮಲ್ಲ: ಜಟ್ಟಿ; ಘನ: ಶ್ರೇಷ್ಠ; ಮಾವ: ತಾಯಿಯ ತಮ್ಮ; ಮರ್ದಿಸು: ಕೊಲ್ಲು; ಮೀಸಲಳಿ: ಬಳಸು; ದಿವಿಜಕನ್ನೆ: ಅಪ್ಸರೆ; ಜೋಡಿ: ಜೊತೆಯಾಗು;
ಪದವಿಂಗಡಣೆ:
ಕೇಶಿ +ಧೇನುಕ +ವತ್ಸಲಂಬ +ಬ
ಕಾಸುರನು +ತೃಣವರ್ತನ್+ಅಘನೆಂಬ್
ಆ +ಸಮರ್ಥರ +ಸೀಳಿ +ಬಿಸುಟನು+ ಬಾಲಕೇಳಿಯಲಿ
ಗಸಿಯಾದುದು+ ದಂತಿ +ಮಲ್ಲರದ್
ಏಸು+ಘನ +ಮಾವನನು +ಮರ್ದಿಸಿ
ಮೀಸಲಳಿಯದ +ದಿವಿಜಕನ್ನೆಯರೊಡನೆ+ ಜೋಡಿಸಿದ
ಅಚ್ಚರಿ:
(೧) ಮ ಕಾರದ ಸಾಲು ಪದ – ಮಲ್ಲರದೇಸುಘನ ಮಾವನನು ಮರ್ದಿಸಿ ಮೀಸಲಳಿಯದ