ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ (ದ್ರೋಣ ಪರ್ವ, ೯ ಸಂಧಿ, ೪೭ ಪದ್ಯ)
ತಾತ್ಪರ್ಯ:
ಅರ್ಜುನನ ಬಾಣಗಳನ್ನು ದ್ರೋಣನು ಕಡಿದು ಹಾಕಿ, ಬಾಣಗಳಿಂದ ಅವನಿಗೆ ಹೊಡೆದು, ಅರ್ಜುನ, ನೀನು ದಿಟ್ಟ, ಆದರೆ ಈ ಯುದ್ಧವು ನಮಗೆ ಗಿಟ್ಟುತ್ತದೆ ಎಂದನು. ಆಗ ಕೃಷ್ಣನು ಅರ್ಜುನನ ಮೇಲೆ ಕೆರಳಿ, ಅರ್ಜುನ ನೀನು ಯುದ್ಧಮಾಡಿ ಗುರುವನ್ನು ಗೆಲ್ಲುವೆಯಾ? ಹುಚ್ಚೇ ವಿನಯದಿಂದ ಅವರನ್ನು ಗೆಲ್ಲು ಎಂದು ಹೇಳಿದನು.
ಅರ್ಥ:
ಸರಳು: ಬಾಣ; ಸವರು: ನಾಶಗೊಳಿಸು; ಅಸ್ತ್ರ: ಶಸ್ತ್ರ; ಚಯ: ಸಮೂಹ; ಎಚ್ಚು: ಬಾಣ ಪ್ರಯೋಗ ಮಾಡು; ಲಾಗು: ನೆಗೆಯುವಿಕೆ, ಲಂಘನ; ಧುರ: ಯುದ್ಧ, ಕಾಳಗ; ದಿಟ್ಟ: ಧೈರ್ಯಶಾಲಿ, ಸಾಹಸಿ; ಲೇಸು: ಒಳಿತು; ಸುರಿ: ವರ್ಷಿಸು; ಕೆರಳು: ಕೋಪಗೊಳ್ಳು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮರುಳ: ಮೂಢ; ಗುಣ:ನಡತೆ, ಸ್ವಭಾವ; ಗುರು: ಆಚಾರ್ಯ; ಗೆಲುವು: ಜಯ; ಕಾದು: ಹೋರಾಡು;
ಪದವಿಂಗಡಣೆ:
ಸರಳ +ಸವರಿ +ಮಹಾಸ್ತ್ರ+ಚಯದಲಿ
ನರನನ್+ಎಚ್ಚನು +ನಮ್ಮ +ಲಾಗಿನ
ಧುರವು +ತಾನಿದು +ದಿಟ್ಟನಹೆಯೋ +ಪಾರ್ಥ +ಲೇಸೆನುತ
ಸರಳು +ಸುರಿಯಲು +ಕೃಷ್ಣ +ಪಾರ್ಥನ
ಕೆರಳಿದನು +ಫಡ +ಮರುಳೆ +ಗುಣದಲಿ
ಗುರುವ +ಗೆಲುವುದ +ಮಾಡು +ಗೆಲುವಾ+ ಕಾದಿ+ ನೀನೆಂದ
ಅಚ್ಚರಿ:
(೧) ಗುರುಗಳನ್ನು ಗೆಲ್ಲಲು ಕೃಷ್ಣನ ಸಲಹೆ – ಗುಣದಲಿ ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ