ಎನಲು ಧಿಮ್ಮನೆ ಕೊಳದೊಳಗೆ ನಿಂ
ದನು ಮುಕುಂದನು ಸುರಪ ಸುತನಾ
ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ
ತನಯನಳಿಯದೆ ಮಾಣ ಗಗನ
ಧ್ವನಿಯೊಳಾದುದು ವಾರ್ತೆ ಚಿತ್ತಕೆ
ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ (ದ್ರೋಣ ಪರ್ವ, ೮ ಸಂಧಿ, ೬ ಪದ್ಯ)
ತಾತ್ಪರ್ಯ:
ಅರ್ಜುನನು ಕರೆದೊಡನೆ ಕೃಷ್ಣನು ನೀರಿನಿಂದ ಧಿಮ್ಮನೆ ಮೇಲೆದ್ದು ನಿಂತು ಅರ್ಜುನನ ಮುಖವನ್ನು ನೋಡಿ, ಏನಾಯಿತು ಅದೇನು ಎಂದು ಕೇಳಿದನು. ಅರ್ಜುನನು ಜೋರಾಗಿ ಅಳುತ್ತಾ ಆಕಾಶವಾಣಿಯಾಯಿತು, ಅಭಿಮನ್ಯುವು ಬದುಕಿಲ್ಲ. ಮನಸ್ಸಿಗೆ ಚೂಪಾದ ಬಾನ ನಟ್ಟಿದೆ ಎನ್ನಲು, ಕೃಷ್ಣನು ಹುಚ್ಚಾ ಬಾ ಎಂದು ರಥವನ್ನು ಹತ್ತಿದನು.
ಅರ್ಥ:
ಧಿಮ್ಮನೆ: ಕೂಡಲೆ; ಕೊಳ: ಸರೋವರ; ನಿಂದು: ನಿಲ್ಲು; ಸುರಪ: ಇಂದ್ರ; ಸುತ: ಮಗ; ಆನನ: ಮುಖ; ನೋಡು: ವೀಕ್ಷಿಸು; ಬಿಕ್ಕಿ: ಜೋರು, ಒಂದೇ ಸಮನೆ; ಬಿರಿ: ಒಡೆ, ಬಿರುಕುಂಟಾಗು; ಅಳು: ರೋದಿಸು, ದುಃಖಿಸು; ತನಯ: ಮಗ; ಅಳಿ: ಸಾವು; ಮಾಣ್: ಬಿಡು; ಗಗನ: ಆಗಸ; ಧ್ವನಿ: ಶಬ್ದ; ವಾರ್ತೆ: ವಿಚಾರ, ವಿಷಯ; ಚಿತ್ತ: ಮನಸ್ಸು; ಮೊನೆ: ಚೂಪು; ಸರಳು: ಬಾಣ; ಮರುಳ: ಹುಚ್ಚ; ಏರು: ಹತ್ತು; ರಥ: ಬಂಡಿ;
ಪದವಿಂಗಡಣೆ:
ಎನಲು+ ಧಿಮ್ಮನೆ +ಕೊಳದೊಳಗೆ +ನಿಂ
ದನು +ಮುಕುಂದನು +ಸುರಪ+ ಸುತನ್
ಆನನವ +ನೋಡುತ್+ಅದೇನ್+ಅದೇನ್+ಎನೆ +ಬಿಕ್ಕಿ +ಬಿರಿದಳುತ
ತನಯನ್+ಅಳಿಯದೆ +ಮಾಣ +ಗಗನ
ಧ್ವನಿಯೊಳ್+ಆದುದು +ವಾರ್ತೆ +ಚಿತ್ತಕೆ
ಮೊನೆಯ +ಸರಳೆನೆ +ಮರುಳೆ +ಬಾ +ಎಂದೇರಿದನು +ರಥವ
ಅಚ್ಚರಿ:
(೧) ಅರ್ಜುನನನ್ನು ಚಿತ್ರಿಸುವ ಪರಿ – ಧಿಮ್ಮನೆ ಕೊಳದೊಳಗೆ ನಿಂದನು; ಚಿತ್ತಕೆ ಮೊನೆಯ ಸರಳೆನೆ