ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ (ಗದಾ ಪರ್ವ, ೧೧ ಸಂಧಿ, ೬೨ ಪದ್ಯ)
ತಾತ್ಪರ್ಯ:
ದ್ರೌಪದಿಯು ತಾನು ರಜಸ್ವಲೆಯೆಂದು ದೈನ್ಯದಿಂದ ಹೇಳಿದರೂ ದ್ರೌಪದಿಯನ್ನು ರಾಜ ಸಭೆಗೆ ಎಳೆತಂದವರು ಹೆಚ್ಚಿನ ಸಜ್ಜನರು. ಸಭೆಯ ನಡುವೆ ಸೀರೆಯನ್ನು ಸುಲಿದವರು ಸುಲಿಸಿದವರು ಧಾರ್ಮಿಕರು, ನಾವು ದುಷ್ಟರು ನೀವು ಸಜ್ಜನರು, ತಾಯೇ ನಾವು ಮಾಡಿದ ತಪ್ಪನ್ನು ಸಹಿಸಿಕೋ ಎಂದು ಭೀಮನು ದ್ರೌಪದಿಯಲ್ಲಿ ಬೇಡಿದನು.
ಅರ್ಥ:
ಲಲನೆ: ಹೆಣ್ಣು; ಋತುಮತಿ: ಸ್ತ್ರೀಯರ ಮುಟ್ಟಿನ ಸಮಯ, ರಜಸ್ವ; ಸಭೆ: ದರಬಾರು; ಎಳೆ: ತನ್ನ ಕಡೆಗೆ ಸೆಳೆದುಕೊ, ಸೆಳೆ; ಅಧಿಕ: ಹೆಚ್ಚು; ಸಜ್ಜನ: ಒಳ್ಳೆಯ ನಡತೆಯುಳ್ಳವ; ಅಳಿ: ಸಣ್ಣದು; ಉಟ್ಟ: ಧರಿಸಿದ; ಸೀರೆ: ಬಟ್ಟೆ; ಊರು: ಪ್ರದೇಶ; ಮಧ್ಯ: ನಡುವೆ; ಸುಲಿಸು: ಬಿಚ್ಚು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಸುಜನ: ಒಳ್ಳೆಯವ; ಸ್ಖಲಿತ: ತಪ್ಪು, ಅಪರಾಧ; ಸೈರಿಸು: ತಾಳು, ಸಹಿಸು; ತಾಯೆ: ಮಾತೆ;
ಪದವಿಂಗಡಣೆ:
ಲಲನೆ +ಋತುಮತಿಯೆಂದಡೆಯು+ ಸಭೆ
ಗೆಳೆದು +ತಂದವರ್+ಅಧಿಕ+ಸಜ್ಜನರ್
ಅಳಿಕುಳಾಳಿಕೆಯುಟ್ಟ+ ಸೀರೆಯನ್+ಊರು+ಮಧ್ಯದಲಿ
ಸುಲಿಸಿದರು+ ಧಾರ್ಮಿಕರು +ತಾವೇ
ಖಳರು +ನೀವೇ +ಸುಜನರ್+ಎಮ್ಮೀ
ಸ್ಖಲಿತವನು +ನೀವಿನ್ನು +ಸೈರಿಸಿ +ತಾಯೆ +ನಮಗೆಂದ
ಅಚ್ಚರಿ:
(೧) ಕೌರವರ ಮಹಾಪರಾಧ – ಅಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ ಸುಲಿಸಿದರು
(೨) ಸಜ್ಜನ, ಧಾರ್ಮಿಕ, ಸುಜನ – ಸಾಮ್ಯಾರ್ಥ ಪದ