ಪದ್ಯ ೩೬: ಅಶ್ವತ್ಥಾಮನು ಕೌರವನಿಗೆ ಏನನ್ನು ಹೇಳಿದನು?

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಮಾತನಾಡುತ್ತಾ, ಇಗೋ ಅಸ್ತ್ರಗಳೆಂಬ ಮಹಾ ಮಂತ್ರಗಳಿವೆ. ಮಹಾಧನಸ್ಸುಗಳೆಂಬ ತುಪ್ಪವಿದೆ. ಸವನಗಳು ಮೂವರಲ್ಲಿ ಒಬ್ಬೊಬ್ಬರಲ್ಲೂ ಇವೆ. ರಾಜ, ನೀನು ದೀಕ್ಷಿತನಾಗು. ಉಳಿದ ಪಾಂಡವರಿಗೂ ಅವರ ಸೇನೆಗೂ ಭೂಮಿವಶವಾಗುವುದೋ, ಸ್ವರ್ಗವೋ ನೋಡಬಹುದು ಎಂದು ನುಡಿದನು.

ಅರ್ಥ:
ಮಹಾ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಸ್ತ್ರ: ಶಸ್ತ್ರ; ಸಂತತಿ: ವಂಶ, ಪೀಳಿಗೆ; ಧನು: ಬಿಲ್ಲು; ಸತ್ಕೃತಿ: ಒಳ್ಳೆಯ ಕಾರ್ಯ; ಸವನ: ಯಜ್ಞ, ಯಾಗ, ಮಂಗಳ ಸ್ನಾನ; ಅಪೇಕ್ಷೆ: ಇಚ್ಛೆ, ಬಯಕೆ; ತ್ರೈ: ಮೂರು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಅವನಿಪತಿ: ರಾಜ; ಸೇಸೆದಳಿ: ದೀಕ್ಷಿತನಾಗು; ಸೇಸೆ: ಮಂಗಳಾಕ್ಷತೆ; ಮಿಕ್ಕ: ಉಳಿದ; ವಿರೋಧಿ: ವೈರಿ; ವರ್ಗ: ಗುಂಪು; ದಿವ: ಸ್ವರ್ಗ; ಧರೆ: ಭೂಮಿ; ನೋಡು: ವೀಕ್ಷಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಇವೆ +ಮಹಾಮಂತ್ರ+ಅಸ್ತ್ರ+ಸಂತತಿ
ಇವೆ +ಮಹಾಧನು+ರಾಜ್ಯ+ಸತ್ಕೃತಿ
ಸವನ+ ಸಾಪೇಕ್ಷಂಗಳಿವೆ +ತ್ರೈರಥಿಕರ್+ಒಬ್ಬರಲಿ
ಅವನಿಪತಿ +ನೀ +ಸೇಸೆದಳಿ+ ಮಿ
ಕ್ಕವರು +ಸೇನೆ +ವಿರೋಧಿ+ವರ್ಗಕೆ
ದಿವವೊ +ಧರೆಯೋ +ನೋಡಲಹುದ್+ಏಳೆಂದನಾ +ದ್ರೌಣಿ

ಅಚ್ಚರಿ:
(೧) ದಿವವೊ, ಧರೆಯೋ – ಪದಗಳ ಬಳಕೆ