ಬೇಡಲರಿಯೆವು ಬೇಡುವರ ಕೂ
ಡಾಡುವವರಾವಲ್ಲ ಕದನವ
ಬೇಡಬಲ್ಲೆವು ಕರೆಯಿಕೊಡಲಾಪರೆ ಧನೇಶ್ವರನ
ಬೇಡುವುದು ಗದೆ ನಿಮ್ಮ ವಕ್ಷವ
ತೋಡಿ ನೆತ್ತರುಗೊಳದೊಳೋಕುಳಿ
ಯಾಡುವುದನೆಂದನಿಲಸುತ ತೂಗಿದನು ನಿಜಗದೆಯ (ಅರಣ್ಯ ಪರ್ವ, ೧೧ ಸಂಧಿ, ೫೦ ಪದ್ಯ)
ತಾತ್ಪರ್ಯ:
ನಮಗೆ ಬೇಡುವುದು ತಿಳಿದಿಲ್ಲ, ಬೇಡುವವರ ಜೊತೆಯಲ್ಲಿರುವುದೂ ನಮಗೆ ಗೊತ್ತಿಲ್ಲ. ಕುಬೇರನನ್ನು ಕರೆಯಿರಿ, ಅವನೊಡನೆ ಯುದ್ಧವನ್ನು ಬೇಡಬಲ್ಲೆವು, ನಮ್ಮ ಗದೆಯು ನಿಮ್ಮ ಎದೆಯನ್ನು ಬಗೆದು ಆ ರಕ್ತದ ಕೊಳದ ಓಕುಳಿಯಲ್ಲಿ ಈಜಾಡುತ್ತೇನೆ ಎಂದು ಬೇಡುತ್ತದೆ ಎಂದು ತನ್ನ ಗದೆಯನ್ನು ತಿರುವುತ್ತಾ ಹೇಳಿದನು.
ಅರ್ಥ:
ಬೇಡು: ಕೇಳು; ಅರಿ: ತಿಳಿ; ಕೂಡ: ಜೊತೆ; ಆಡುವವ: ಜೋತೆಯಲ್ಲಿ ಸೇರು; ಕದನ: ಯುದ್ಧ; ಬಲ್ಲೆವು: ತಿಳಿವೆವು; ಕರೆ: ಬರೆಮಾಡು; ಧನೇಶ್ವರ: ಕುಬೇರ; ಗದೆ: ಮುದ್ಗರ; ವಕ್ಷ: ಎದೆ; ತೋಡು: ಚುಚ್ಚು, ತಿವಿ; ನೆತ್ತರು: ರಕ್ತ; ಓಕುಳಿ: ಬಣ್ಣದ ನೀರು; ಅನಿಲಸುತ: ವಾಯುಪುತ್ರ (ಭೀಮ); ತೂಗು: ಅಲ್ಲಾಡಿಸು; ನಿಜ: ತನ್ನ; ಕೊಳ: ಹೊಂಡ;
ಪದವಿಂಗಡಣೆ:
ಬೇಡಲ್+ಅರಿಯೆವು +ಬೇಡುವರ+ ಕೂಡ್
ಆಡುವವರಾವಲ್ಲ+ ಕದನವ
ಬೇಡಬಲ್ಲೆವು +ಕರೆಯಿಕೊಡಲಾಪರೆ +ಧನೇಶ್ವರನ
ಬೇಡುವುದು +ಗದೆ +ನಿಮ್ಮ +ವಕ್ಷವ
ತೋಡಿ +ನೆತ್ತರು+ಕೊಳದೊಳ್+ಓಕುಳಿ
ಆಡುವುದನ್+ಎಂದ್+ಅನಿಲಸುತ+ ತೂಗಿದನು +ನಿಜಗದೆಯ
ಅಚ್ಚರಿ:
(೧) ಬೇಡ, ಬೇಡು ಪದದ ಬಳಕೆ
(೨) ಭೀಮನ ಪರಾಕ್ರಮದ ಮಾತು – ಬೇಡುವುದು ಗದೆ ನಿಮ್ಮ ವಕ್ಷವ ತೋಡಿ ನೆತ್ತರುಗೊಳದೊಳೋಕುಳಿಯಾಡುವುದನೆಂದನಿಲಸುತ ತೂಗಿದನು ನಿಜಗದೆಯ