ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೨೯ ಪದ್ಯ)
ತಾತ್ಪರ್ಯ:
ಪಾತಾಳದಲ್ಲಿರುವ ನಾಗಗಳು, ಭೂಮಿಯಲ್ಲಿರುವ ಮನುಷ್ಯರು, ಸ್ವರ್ಗದಲ್ಲಿರುವ ದೇವತೆಗಳು ಯಾರು ಇದನ್ನು ಮೀರಲಾರರು. ದೈವವು ಆದಿಯಲ್ಲಿ ಮೃತ್ಯುವನ್ನು ನಿರ್ಮಿಸಿತು. ಅರಸ, ಹಿರ್ಯ, ಧನಿಕ, ಬಡವ್ ಯಾರೇ ಆಗಲಿ ಹುಟ್ಟಿದ ಮೇಲೆ ಸಾಯಲೇಬೇಕು.
ಅರ್ಥ:
ಉರಗ: ಹಾವು; ನರ: ಮನುಷ್ಯ; ದಿವಿಜ: ದೇವತೆ; ಆದಿ: ಮುಂತಾದ; ಪರಿಹರ: ನಿವಾರಣೆ; ಪರುಠವ: ವಿಸ್ತಾರ, ಹರಹು; ಮುನ್ನ: ಮುಂಚೆ; ಆದಿ: ಮುಂಚೆ; ನಿರ್ಮಿಸು: ರಚಿಸು; ಮೃತ್ಯು: ಸಾವು; ಅರಸ: ರಾಜ; ಧನಿಕ: ಶ್ರೀಮಂತ; ಹಿರಿಯ: ದೊಡ್ಡವ; ಬಡವ: ದರಿದ್ರ; ಮರಣ: ಸಾವು; ಜನಿಸು: ಹುಟ್ಟು; ಬಳಿಕ: ನಂತರ; ಮಗ: ಪುತ್ರ; ಕೇಳು: ಆಲಿಸು;
ಪದವಿಂಗಡಣೆ:
ಉರಗ +ನರ +ದಿವಿಜಾದಿಗಳಿಗ್+ಇದು
ಪರಿಹರಿಸಲ್+ಅಳವಲ್ಲ+ ದೈವದ
ಪರುಠವಣೆ+ ಮುನ್ನಾದಿಯಲಿ+ ನಿರ್ಮಿಸಿತು+ ಮೃತ್ಯುವನು
ಅರಸನಾಗಲಿ+ ಧನಿಕನಾಗಲಿ
ಹಿರಿಯನಾಗಲಿ+ ಬಡವನಾಗಲಿ
ಮರಣ +ಜನಿಸಿದ+ ಬಳಿಕ+ ತಪ್ಪದು +ಮಗನೆ+ ಕೇಳೆಂದ
ಅಚ್ಚರಿ:
(೧) ಗೀತೆಯ ವಾಕ್ಯವನ್ನು ಹೇಳುವ ಪರಿ – ಮರಣ ಜನಿಸಿದ ಬಳಿಕ ತಪ್ಪದು