ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ (ಕರ್ಣ ಪರ್ವ, ೨೭ ಸಂಧಿ, ೧೩ ಪದ್ಯ)
ತಾತ್ಪರ್ಯ:
ಕೃಷ್ಣನಿಗೆ ಕರ್ಣನ ಮೇಲೆ ಏಕಿಷ್ಟು ದ್ವೇಷ ಎಂದು ಚಿಂತಿಸುತ್ತಾ ಅರ್ಜುನನು ಘಾಸಿಯಾದನು. ಒಮ್ಮೆ ಕರುಣೆ ಇನ್ನೊಮ್ಮೆ ಕೋಪಗಳು ಮನಸ್ಸಿನಲ್ಲಿ ಹುಟ್ಟಿದವು. ಕರ್ಣನ ಮೇಲೆ ಇನ್ನೇಕೆ ಆಶೆ ಎನ್ನುತ್ತಾ ಅಂಜಲಿಕಾಸ್ತ್ರವನ್ನು ಹೂಡಿದನು. ಆ ಅಸ್ತ್ರವು ಹೊಗೆಯ ಹೊರಳಿಗಳು, ಕಿಡಿಯ ಪುಂಜಗಳನ್ನುಗುಳುತ್ತಾ ಮುಂದುವರಿಯಿತು. ಆ ಅಸ್ತ್ರವು ಅಮೋಘವಾದುದು, ಅದನ್ನು ಗೆದ್ದವರು ಯಾರೂ ಇಲ್ಲ.
ಅರ್ಥ:
ಈಸು: ಇಷ್ಟು; ದ್ವೇಷ; ಹಗೆ; ಮನ: ಮನಸ್ಸು; ಘಾಸಿ: ಹಿಂಸೆ, ಕಷ್ಟ; ಕರುಣ: ದಯೆ; ಕ್ರೋಧ: ಕೋಪ; ಉಪಟಳ: ತೊಂದರೆ, ಹಿಂಸೆ; ಆಸೆ: ಬಯಕೆ; ಸೆಳೆ: ಎಳೆ, ಹೊರತೆಗೆ; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿಯ ಚೂರು; ಹೊಗೆ: ಧೂಮ; ಹೊದರು: ಗುಂಪು, ಸಮೂಹ, ತೊಡಕು; ಮೀಸಲು: ಮುಡಿಪು, ಪ್ರತ್ಯೇಕತೆ; ಮಾರ್ಗಣ: ಬಾಣ;
ಪದವಿಂಗಡಣೆ:
ಈಸು+ ಕರ್ಣನ +ಮೇಲೆ +ಬಹಳ
ದ್ವೇಷವ್+ಏನೋ +ಎನುತ +ಮನದಲಿ
ಘಾಸಿಯಾದನು +ಪಾರ್ಥ +ಕರುಣ+ಕ್ರೋಧದ್+ಉಪಟಳಕೆ
ಆಸೆಯಿನ್ನೇಕೆನುತ +ಸೆಳೆದನು
ಸೂಸು+ಕಿಡಿಗಳ +ಹೊಗೆಯ +ಹೊದರಿನ
ಮೀಸಲ್+ಅಳಿದಾರ್+ಎಂಜಲಿಸದ್+ಅಂಜಳಿಕ ಮಾರ್ಗಣವ
ಅಚ್ಚರಿ:
(೧) ಅಂಜಳಿಕೆ ಬಾಣದ ವಿವರ – ಸೆಳೆದನು ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ