ಪದ್ಯ ೩೭: ಯಾರ ದೆಸೆಯಿಂದ ದ್ವಾಪರಯುಗದಲ್ಲಿ ಧರ್ಮ ನಿಂತಿದೆ?

ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ
ಲಾಯದಲಿ ಕಟ್ಟಿದರ್ಧರ್ಮವನೊಂದು ಪಾದದಲಿ
ರಾಯ ಕೇಳೈ ದ್ವಾಪರದಲಿ ದೃ
ಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ (ಅರಣ್ಯ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃತಯುಗದ ಬಳಿಕ ತ್ರೇತಾಯುಗವು ಬರಲು ಧರ್ಮದ ಲಾಯದಲ್ಲಿ ಒಂದು ಪಾದ ಅಧರ್ಮವನ್ನು ಕಟ್ಟಿದರು. ಧರ್ಮವು ಮೂರೇ ಪಾದಗಳಿಂದ ನಿಂತಿತು, ಬಳಿಕ ಬಂದ ದ್ವಾಪರ ಯುಗದಲ್ಲಿ ಧರ್ಮದ ಎರಡ್ ಪಾದಗಳು ಲೋಪವಾಗಿ ಎರಡೇ ಪಾದಗಳುಳಿದವು, ಎಲೈ ರಾಜ ನಿನ್ನ ದೆಸೆಯಿಂದ ಧರ್ಮವು ನಿಂತೆದೆ ಎಂದು ಮುನಿಪ ತಿಳಿಸಿದರು.

ಅರ್ಥ:
ಯುಗ: ವಿಶ್ವದ ದೀರ್ಘವಾದ ಕಾಲಖಂಡ; ತರುವಾಯ: ನಂತರ; ಬಳಿಕ: ನಂತರ; ಧರ್ಮ: ಧಾರಣ ಮಾಡಿದುದು; ಲಾಯ: ಕುದುರೆ ಕಟ್ಟುವ ಜಾಗ; ಕಟ್ಟು: ಬಂಧಿಸು; ಅಧರ್ಮ: ನ್ಯಾಯವಲ್ಲದುದು; ಪಾದ: ಚರಣ; ರಾಯ: ಒಡೆಯ; ಕೇಳು: ಆಲಿಸು; ದೃಢ: ಗಟ್ಟಿಯಾದುದು; ಆಯ: ಪ್ರಮಾಣ, ಪರಿಮಿತಿ; ಬೀಯ: ವ್ಯಯ, ನಷ್ಟ; ನಿಂದು: ನಿಲ್ಲಿಸು; ದೆಸೆ: ಕಾರಣ;

ಪದವಿಂಗಡಣೆ:
ಆ +ಯುಗದ +ತರುವಾಯಲ್+ಆ+ ತ್ರೇ
ತಾ+ಯುಗವಲೇ +ಬಳಿಕ +ಧರ್ಮದ
ಲಾಯದಲಿ +ಕಟ್ಟಿದ್+ಅರ್ಧರ್ಮವನ್+ಒಂದು +ಪಾದದಲಿ
ರಾಯ +ಕೇಳೈ +ದ್ವಾಪರದಲಿ +ದೃ
ಢಾಯದಲಿ +ತಾ +ಧರ್ಮವ್+ಎರಡಡಿ
ಬೀಯವಾದುದು +ನಿಂದುದ್+ಎನಿಸಿತು +ನಿನ್ನ +ದೆಸೆಯಿಂದ

ಅಚ್ಚರಿ:
(೧) ಧರ್ಮಜನ ಹಿರಿಮೆ: ರಾಯ ಕೇಳೈ ದ್ವಾಪರದಲಿ ದೃಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ

ಪದ್ಯ ೩೬: ಭೀಮನು ಮತ್ತೆ ಹನುಮನ ಬಳೆ ಏನು ಬೇಡಿದನು?

ಅದರಿನೀ ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ತೋರಬೇಕೆಂದ (ಅರಣ್ಯ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ವಾಪರಯುಗದ ಕೊನೆಯಲ್ಲಿರುವ ಮನುಷ್ಯರ ಧರ್ಮವು ಸಂಶಯಾಸ್ಪದ. ಈಗ ಮನುಷ್ಯರಿಗೆ ನಮ್ಮ ರೂಪವು ಕಾಣಿಸುವುದಿಲ್ಲ, ನಾನು ಇದ್ದುದನ್ನು ಇದ್ದಂತೆ ಹೇಳಿದ್ದೇನೆ ಎನ್ನಲು, ಭೀಮನು ಮತ್ತೆ ಹನುಮನ ಪಾದಯುಗಳಿಗೆ ನಮಸ್ಕರಿಸಿ, ನಾನು ನಿಮ್ಮನ್ನು ನಿರ್ಬಂಧಿಸಲಾರೆ, ಆದರೆ ನಿನ್ನ ರೂಪವನ್ನು ತೊರಿಸು ಎಂದು ಬೇಡಿದನು.

ಅರ್ಥ:
ಕಡೆ: ಕೊನೆ; ಉದಿತ: ಹುಟ್ಟಿದ; ಮಾನುಷ: ಮನುಷ್ಯರು; ಸಂಶಯ: ಅನುಮಾನ, ಸಂದೇಹ; ಧರ್ಮ: ಧಾರಣೆ ಮಾಡಿದುದು; ರೂಪ: ಆಕಾರ; ಗೋಚರ: ತೋರು; ಮರ್ತ್ಯ: ಮನುಷ್ಯ; ನಿಧಾನ: ವಿಳಂಬ, ನಿರ್ಧಾರ, ದೃಢ ಸಂಕಲ್ಪ; ಪದಯುಗ: ಎರಡು ಪಾದಗಳು; ಮಗುಳು: ಮತ್ತೆ; ಎರಗು: ನಮಸ್ಕರಿಸು; ನಿರ್ಬಂಧ: ಪಟ್ಟು ಹಿಡಿಯುವಿಕೆ, ದೃಢ ಸಂಕಲ್ಪ; ಬಿನ್ನಹ: ಕೋರಿಕೆ; ತೋರು: ಗೋಚರಿಸು;

ಪದವಿಂಗಡಣೆ:
ಅದರಿನ್+ಈ+ ದ್ವಾಪರದ +ಕಡೆಯಲ್
ಉದಿತ +ಮಾನುಷ +ಧರ್ಮ +ಸಂಶಯವ್
ಇದರೊಳ್+ಎಮ್ಮಯ +ರೂಪು +ಗೋಚರವಲ್ಲ+ ಮರ್ತ್ಯರಿಗೆ
ಇದು +ನಿಧಾನವು +ಭೀಮ+ಎನೆ+ ತತ್
ಪದಯುಗಕೆ+ ಮಗುಳೆರಗಿ+ ನಿರ್ಬಂ
ಧದಲಿ+ ಬಿನ್ನಹ +ಮಾಡಲಮ್ಮೆನು+ ತೋರಬೇಕೆಂದ

ಅಚ್ಚರಿ:
(೧) ಹನುಮನ ರೂಪವು ಏಕೆ ಕಾಣುವುದಿಲ್ಲ ವೆಂದು ಹೇಳುವ ಪರಿ – ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ

ಪದ್ಯ ೩೪: ಯಾವುದು ಯುಗಧರ್ಮ?

ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತ ಬಲರು ತ್ರೇತೆಯವರಾ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗ ಧರ್ಮ ಕೃತ ಮೊದಲಾಗಿ ಕಲಿಯುಗಕೆ (ಅರಣ್ಯ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹನುಮಂತ ಯುಗಧರ್ಮದ ಬಗ್ಗೆ ತಿಳಿಸುತ್ತಾ, ತ್ರೇತಾಯುಗದವರಿಗೆ ಹೋಲಿಸಿದರೆ ಕೃತಯುಗದವರು ಅದ್ಭುತ ಪರಾಕ್ರಮಶಾಲಿಗಳು, ಬಲಶಾಲಿಗಳು ಆಗಿರುತ್ತಾರೆ. ದ್ವಾಪರ ಯುಗದವರಿಗಿಂತ ತ್ರೇತಾಯುಗದವರು ಮಹಾಪರಾಕ್ರಮಶಾಲಿಗಳು. ಕಲಿಯುಗದ ಮನುಷ್ಯರು ದ್ವಾಪರಯುಗದವರಿಗೆ ಹೋಲಿಸಿದಾಗ ಹೀನ ಸತ್ವರು, ಇದು ಯುಗಧರ್ಮ ಎಂದು ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಅತಿ: ಬಹಳ; ಪರಾಕ್ರಮ: ಶೌರ್ಯ; ಯುಕ್ತ: ಅನುಸರಣೆ, ತರ್ಕವಾದ; ಅದುಭುತ: ಆಶ್ಚರ್ಯ; ಬಲರು: ಬಲಶಾಲಿಗಳು; ಸ್ಥಿತಿ: ಇರವು, ಅಸ್ತಿತ್ವ; ವಿತತ: ವಿಸ್ತಾರವಾದ; ಸತ್ವ: ಸಾರ; ದುರ್ಮತಿ: ಕೆಟ್ಟ ಬುದ್ಧಿ; ವ್ರಾತ: ಗುಂಪು; ಮನುಷ್ಯ: ನರ; ಹೀನಾಕೃತಿ:ಕೀಳಾದ ಕೆಲಸ, ಕೆಟ್ಟ ಕೆಲಸ;

ಪದವಿಂಗಡಣೆ:
ಕೃತಯುಗದವರು+ ತ್ರೇತೆಯವರಿಂದ್
ಅತಿ +ಪರಾಕ್ರಮ+ ಯುಕ್ತರ್+ಅವರ್+ಅದು
ಭುತ+ ಬಲರು+ ತ್ರೇತೆಯವರಾ+ ದ್ವಾಪರ +ಸ್ಥಿತಿಗೆ
ವಿತತ+ ಸತ್ವರು +ಕಲಿಯುಗದ +ದು
ರ್ಮತಿ +ಮನುಷ್ಯ+ವ್ರಾತ+ ಹೀನಾ
ಕೃತಿ +ಕಣಾ +ಯುಗ +ಧರ್ಮ +ಕೃತ+ ಮೊದಲಾಗಿ +ಕಲಿಯುಗಕೆ

ಅಚ್ಚರಿ:
(೧) ಕಲಿಯುಗದ ಗುಣಧರ್ಮ – ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ