ಪದ್ಯ ೩೩: ಕೃಷ್ಣನನ್ನು ಪಾಂಡವರು ಹೇಗೆ ಬರೆಮಾಡಿದರು?

ರಥವಿಳಿದನಸುರಾರಿ ಸುಮನೋ
ರಥವಿಳಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದ್ರೌ
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ (ಅರಣ್ಯ ಪರ್ವ, ೧೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರ ಮನೋರಥವು ಇಳಿದು ಬಂದಿತೋ ಎಂಬಂತೆ ಶ್ರೀಕೃಷ್ಣನು ರಥವಿಳಿದು ಬಂದು ಸಮ್ತಸದಿಂದ ಪಾಂಡವರನ್ನು ತನ್ನು ಭುಜಗಳಿಂದ ಆಲಿಂಗಿಸಿದನು. ಬ್ರಾಹ್ಮಣರ ಆಶೀರ್ವಚನೆಗೆ ತಲೆಬಾಗಿ, ದ್ರೌಪದಿಯ ಬಳಿ ಬಂದನು. ದೇವತೆಗಳು ಉಘೇ ಎಂದು ಸಂತಸದಿಂದ ಉದ್ಗರಿಸಿದರು.

ಅರ್ಥ:
ರಥ: ಬಂಡಿ; ಇಳಿ: ಕೆಳಕ್ಕೆ ಬಂದು; ಅಸುರಾರಿ: ರಾಕ್ಷಸರ ವೈರಿ; ಮನೋರಥ: ಆಸೆ, ಬಯಕೆ; ಬಪ್ಪಂತೆ: ಬರುವಂತೆ; ಸುತ: ಮಕ್ಕಳು; ಭುಜ: ತೋಳು; ಐಸು: ಅಷ್ಟು; ಹರುಷ: ಸಂತಸ; ಕ್ಷಿತಿ: ಭೂಮಿ; ಕ್ಷಿತಿಯಮರರು: ಬ್ರಾಹ್ಮಣ; ಆಶೀರ್ವಚನ: ಶುಭನುಡಿ; ಸಂಸ್ತುತಿ: ಭಕ್ತಿಯಿಂದಾಚರಿಸಿದ ಸ್ತವನ, ಸ್ತೋತ್ರ; ತಲೆ: ಶಿರ; ಬಾಗು: ತಗ್ಗಿಸು; ಮಿಗೆ: ಮತ್ತು; ಹೊರೆ: ಹತ್ತಿರ, ಸಮೀಪ; ಉಘೇ: ಜಯಘೋಷ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ರಥವಿಳಿದನ್+ಅಸುರಾರಿ +ಸುಮನೋ
ರಥವಿಳಿದು +ಬಪ್ಪಂತೆ+ ಕುಂತೀ
ಸುತರ+ ನಿಜ+ಭುಜವಾರೆತಕ್ಕೈಸಿದನು+ ಹರುಷದಲಿ
ಕ್ಷಿತಿ+ಅಮರರ+ಆಶೀರ್ವಚನ+ ಸಂ
ಸ್ತುತಿಗೆ +ತಲೆವಾಗುತ್ತ+ ಮಿಗೆ +ದ್ರೌ
ಪತಿಯ +ಹೊರೆಗ್+ಐದಿದನ್+ಉಘೇ+ಎಂದುದು +ಸುರ+ಸ್ತೋಮ

ಅಚ್ಚರಿ:
(೧) ಪಾಂಡವರ ಹರ್ಷವನ್ನು ಹೇಳುವ ಪರಿ – ರಥವಿಳಿದನಸುರಾರಿ ಸುಮನೋರಥವಿಳಿದು ಬಪ್ಪಂತೆ