ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನ ನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ (ಸಭಾ ಪರ್ವ, ೧೭ ಸಂಧಿ, ೧೬ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನ ಅಂಧಪ್ರೀತಿ ಹೆಚ್ಚಿತು, ಮಗನೇ ನಾನೇನು ಮಾಡಬೇಕು, ಪಾಂಡವರನ್ನು ಹಾಳುಮಾಡಲು ಯಾವ ಮಾರ್ಗವನ್ನು ಹುಡುಕಿರುವೆ? ದೈವದ ರೀತಿಯು ಕಠಿಣವಾದುದು, ಅದನ್ನು ಅನ್ಯಾಯದ ಮಾರ್ಗದಲ್ಲಿ ಮುರಿಯಲಾಗುವುದಿಲ್ಲ, ನಾನು ನಿನ್ನಿಂದ ಬೇರೆಯವನೇ? ದುಃಖಿಸಬೇಡ, ಮನಸ್ಸಿನಲ್ಲಿರುವುದನ್ನು ಹೇಳು ಎಂದು ದುರ್ಯೋಧನನಿಗೆ ಹೇಳಿದನು.
ಅರ್ಥ:
ಮಾಡು: ಕಾರ್ಯರೂಪಕ್ಕೆ ತರು; ಕೆಡಿಸು: ಹಾಳುಮಾಡು; ಹದ: ರೀತಿ; ಕಂಡೆ: ನೋಡಿ; ದೈವ: ಭಗವಂತ; ಅಧೀನ: ವಶ; ನಿಷ್ಠ: ಶ್ರದ್ಧೆಯುಳ್ಳವನು; ನಿಷ್ಠುರ: ಕಠಿಣ; ಮುರಿ: ಸೀಳು; ಅರಿ: ತಿಳಿ; ಅನ್ಯಾಯ: ಸರಿಯಲ್ಲದ; ತಂತ್ರ: ಕುಟಿಲ ರಾಜಕಾರಣ; ಅಭಿಮತ: ಅಭಿಪ್ರಾಯ; ಆನು: ನಾನು; ಹೊರಗೆ: ಬೇರೆ; ಕಂದ: ಮಗು; ನುಡಿ: ಮಾತಾದು; ದುಮ್ಮಾನ: ದುಃಖ,ದುಗುಡ; ಬೇಡ: ತಡೆ, ನಿಲ್ಲಿಸು; ಆಣೆ: ಪ್ರಮಾಣ; ಸಂತೈಸು: ಸಮಾಧಾನಪಡಿಸು; ಮಗ: ಸುತ;
ಪದವಿಂಗಡಣೆ:
ಏನು +ಮಾಡುವೆವ್+ಅವರ +ಕೆಡಿಸುವಡ್
ಏನು +ಹದನನು+ ಕಂಡೆ +ದೈವಾ
ಧೀನ +ನಿಷ್ಠರ +ಮುರಿವುದರಿದ್+ಅನ್ಯಾಯ +ತಂತ್ರದಲಿ
ಏನು +ನಿನ್+ಅಭಿಮತವು+ ನಿನ್ನೊಳಗ್
ಆನು +ಹೊರಗೇ +ಕಂದ +ನುಡಿ +ದು
ಮ್ಮಾನ +ಬೇಡ್+ಎನ್ನಾಣೆನುತ+ ಸಂತೈಸಿದನು+ ಮಗನ
ಅಚ್ಚರಿ:
(೧) ಮಗನಮೇಲೆ ಪೀತಿಯನ್ನು ತೋರುವ ಪರಿ – ಏನು ನಿನ್ನಭಿಮತವು ನಿನ್ನೊಳಗಾನು ಹೊರಗೇ ಕಂದ ನುಡಿ ದುಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ