ಪದ್ಯ ೧: ದೈವದ ಲೀಲೆ ಹೇಗಿರುತ್ತದೆ?

ನಿಯತ ಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೋ ಶಿವ ಶಿವ ಮಹಾದೇವ
ಜಯ ಜಯೆಂದುದು ನಿಖಿಳಜನಝಾ
ಡಿಯಲಿ ಝೋಂಪಿಸಿ ಸೆಳ್ವ ಸೀರೆಗೆ
ಲಯವ ಕಾಣೆನು ಕರುಣವೆಂತುಟೊ ದೇವಕೀಸುತನ (ಸಭಾ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಗಮನವಿಟ್ಟು ಕೇಳು, ಭಗವಂತನ ಭಕ್ತಿಯಿಂದ ಏನೇನು ಆಶ್ಚರ್ಯಗಳಾಗುವವೋ ಶಿವ ಶಿವಾ ಮಹಾದೇವ ಯಾರು ಬಲ್ಲರು? ದುಶ್ಯಾಸನನು ಸೀರೆಯನ್ನು ಸೆಳೆದರೆ ಅದು ಮುಗಿಯದೆ ಮತ್ತೊಂದು ಸೀರೆ ಅದರಿಂದ ಬರುತ್ತಿತ್ತು, ಅದು ಮುಗಿದರೆ ಮತ್ತೊಂದು ಹೀಗಾಗುವುದು ನಿಲ್ಲಲೇ ಇಲ್ಲ, ಇದನ್ನು ನೋಡಿದ ಎಲ್ಲಾ ಸಭಿಕರು ಜಯ ಜಯ ಎಂದು ಘೋಷಿಸಿದರು.

ಅರ್ಥ:
ನಿಯತ: ನಿಶ್ಚಿತವಾದುದು; ಮತಿ: ಬುದ್ಧಿ; ಚಿತ್ತವಿಸು: ಗಮನವಿಟ್ಟು ಕೇಳು; ಮಹೀಪತಿ: ರಾಜ; ದೇವ: ಭಗವಂತ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಆಶ್ಚರ್ಯ: ಅದ್ಭುತ, ವಿಸ್ಮಯ; ಜಯ: ಉಘೇ; ನಿಖಿಳ: ಎಲ್ಲಾ; ಜನ: ನರರು, ಸಮೂಹ; ಝಾಡಿ: ಕಾಂತಿ; ಝೋಂಪಿಸು: ಬೆಚ್ಚಿಬೀಳು; ಸೆಳೆ: ಎಳೆತ; ಸೀರೆ: ಬಟ್ಟೆ, ವಸ್ತ್ರ; ಲಯ: ಅಂತ್ಯ; ಕಾಣು: ತೋರು; ಕರುಣ: ದಯೆ; ಸುತ: ಪುತ್ರ;

ಪದವಿಂಗಡಣೆ:
ನಿಯತ +ಮತಿ +ಚಿತ್ತವಿಸು +ಜನಮೇ
ಜಯ +ಮಹೀಪತಿ+ ದೇವತಾ +ಭ
ಕ್ತಿಯಲ್+ಅದೇನ್+ಆಶ್ಚರ್ಯವೋ+ ಶಿವ+ ಶಿವ+ ಮಹಾದೇವ
ಜಯ +ಜಯೆಂದುದು +ನಿಖಿಳ+ಜನ+ಝಾ
ಡಿಯಲಿ +ಝೋಂಪಿಸಿ +ಸೆಳೆವ+ ಸೀರೆಗೆ
ಲಯವ +ಕಾಣೆನು +ಕರುಣವ್+ಎಂತುಟೊ+ ದೇವಕೀಸುತನ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಬಗೆ – ಶಿವ ಶಿವ ಮಹಾದೇವ
(೨) ಝಾಡಿ, ಝೋಂಪಿಸು – ಪದಗಳ ಬಳಕೆ