ಪದ್ಯ ೬೨: ಅಭಿಮನ್ಯುವಿನ ಸಹಾಯಕ್ಕೆ ಯಾರು ಬಂದರು?

ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ (ದ್ರೋಣ ಪರ್ವ, ೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅಬ್ಬರದ ಕೂಗಿಗೆ ಭೂಮಿಯು ಬಿರಿಯಲು, ಸೈನ್ಯಗಳ ಆರ್ಭಟ ಹೆಚಲು ಅಭಿಮನ್ಯುವೇನಾದನೋ ಎಂದು ಧರ್ಮಜನು ದುಃಖಿಸಿದನು. ಭೀಮ, ನಕುಲ, ದೃಷ್ಟದ್ಯುಮ್ಯರನ್ನು ಕರೆಸಿ ಸೈನ್ಯಸಮೇತ ಅಭಿಮನ್ಯುವಿನ ಸಹಾಯಕ್ಕೆ ಕಳಿಸಿದನು.

ಅರ್ಥ:
ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬೆ: ಜೋರಾದ ಕೂಗು; ಬಲ: ಸೈನ್ಯ; ಅಬ್ಬರಣೆ: ಆರ್ಭಟ; ದೆಖ್ಖಾದೆಖ್ಖಿ: ಮುಖಾಮುಖಿ; ಧರಣಿಪತಿ: ರಾಜ; ಮರುಗು: ತಳಮಳ, ಸಂಕಟ; ಮಗ: ಪುತ್ರ; ಕರೆ: ಬರೆಮಾಡು; ಸಂಗರ: ಯುದ್ಧ; ಪರುಠವ: ಭದ್ರತೆ, ಹೆಚ್ಚಳ, ಆಧಿಕ್ಯ; ಕಳುಹು: ತೆರಳು; ಸೌಭದ್ರ: ಅಭಿಮನ್ಯು; ಪಡಿ: ಸಮಾನವಾದುದು, ಎಣೆ, ಪ್ರತಿ; ಬಲ: ಸೈನ್ಯ;

ಪದವಿಂಗಡಣೆ:
ಧರೆ +ಬಿರಿಯೆ +ಬೊಬ್ಬೆಯಲಿ +ಬಲದ್
ಅಬ್ಬರಣೆ +ದೆಖ್ಖಾದೆಖ್ಖೆಯಾಗಲು
ಧರಣಿಪತಿ +ಮರುಗಿದನು +ಮಗನೇನಾದನೋ+ ಎನುತ
ಕರೆದು+ ಭೀಮನ +ನಕುಳನನು+ ಸಂ
ಗರಕೆ +ಧೃಷ್ಟದ್ಯುಮ್ನ +ದ್ರುಪದರ
ಪರುಠವಿಸಿ +ಕಳುಹಿದನು +ಸೌಭದ್ರಂಗೆ +ಪಡಿ+ಬಲವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿರಿಯೆ ಬೊಬ್ಬೆಯಲಿ ಬಲದಬ್ಬರಣೆ
(೨) ಧರೆ, ಧರಣಿಪತಿ – ಪದಗಳ ಬಳಕೆ