ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊದ್ರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ (ಅರಣ್ಯ ಪರ್ವ, ೨ ಸಂಧಿ, ೮ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಪ್ರತಿಯೊಬ್ಬ ಪಾಂಡವರನ್ನು ಬೇರೆ ಬೇರೆಯಾಗಿ ಅಪ್ಪಿಕೊಂಡು ಅವರ ಕಣ್ಣೀರನ್ನು ತನ್ನ ರೇಷ್ಮೆಯ ಉತ್ತರೀಯದಲ್ಲಿ ಒರಸಿ ಸಂತೈಸುತ್ತಿರಲು, ದಾರಿ ಬಿಡಿ ಪಕ್ಕಕ್ಕೆ ಸರಿಯಿರಿ ಎಂಬ ಕೂಗು ಕೇಳಿಬರಲು, ದ್ರೌಪದಿಯು ಈ ಗೌರವರದ ವಿಕಾರವು ಬೇಡ ಎನ್ನುತ್ತಾ ಬಂದು ಶ್ರೀಕೃಷ್ಣನ ಪಾದಗಳ ಮೇಲೆ ಕವಿದು ಬಿದ್ದಳು.
ಅರ್ಥ:
ಬೇರೆ: ಅನ್ಯ; ತೆಗೆದು: ಎತ್ತಿಕೊಳ್ಳು; ಮುರಾರಿ: ಕೃಷ್ಣ; ಅಪ್ಪು: ಆಲಂಗಿಸು; ಅಡಿಗಡಿಗೆ: ಮತ್ತೆ ಮತ್ತೆ; ಧೃಗುವಾರಿ: ಕಣ್ಣಿರು; ಒರಸು: ಸಾರಿಸು; ಪೀತಾಂಬರ: ರೇಷ್ಮೆ ಬಟ್ಟೆ; ಸೆರಗು: ಉತ್ತರೀಯ; ಸಾರು: ಸರಿ, ಜಾಗ ಬಿಡು; ಉಗ್ಗಡ: ಅತಿಶಯ; ವಿಕಾರ: ಬದಲಾವಣೆ, ಮಾರ್ಪಾಟು; ರಾಯ: ರಾಜ; ನಾರಿ: ಹೆಣ್ಣು; ಬಂದಳು: ಆಗಮಿಸು; ಕವಿ: ಮುಚ್ಚು; ಬಿದ್ದಳು: ಎರಗು; ಹರಿ: ಕೃಷ್ಣ; ಚರಣ: ಪಾದ;
ಪದವಿಂಗಡಣೆ:
ಬೇರೆ +ಬೇರ್+ಐವರನು +ತೆಗೆದು +ಮು
ರಾರಿ+ಅಪ್ಪಿದನ್+ಅಡಿಗಡಿಗೆ +ದೃಗು
ವಾರಿಗಳನ್+ ಒರಸಿದನು +ಪೀತಾಂಬರದ+ ಸೆರಗಿನಲಿ
ಸಾರು +ಸಾರ್+ಎನಲ್+ಉಗ್ಗಡಣೆಯ +ವಿ
ಕಾರವ್+ಇನ್ನೇಕೆನುತ +ರಾಯನ
ನಾರಿ+ ಬಂದಳು+ ಕವಿದು +ಬಿದ್ದಳು +ಹರಿಯ+ ಚರಣದಲಿ
ಅಚ್ಚರಿ:
(೧) ದ್ರೌಪದಿಯನ್ನು ರಾಯನ ನಾರಿ ಎಂದು ಕರೆದಿರುವುದು
(೨) ಮುರಾರಿ, ದೃಗುವಾರಿ, ರಾಯನ ನಾರಿ – ಅಂತ್ಯಪ್ರಾಸದ ಪದಗಳು
(೩) ದ್ರೌಪದಿಯು ಎರಗುವ ಚಿತ್ರಣ – ವಿಕಾರವಿನ್ನೇಕೆನುತ ರಾಯನ ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ