ಪದ್ಯ ೫೦: ಅರ್ಜುನನು ಹೇಗೆ ಮಾಯಾಜಾಲವನ್ನು ಭೇದಿಸಿದನು?

ಘೋರತರವದು ಬಳಿಕ ದುಷ್ಪ್ರತಿ
ಕಾರವಿತರರಿಗಿಂದು ಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾರಚನೆಯಾ ವಿವಿಧ ವಿವರಣ
ದಾರುಭಟೆಯಲಿ ಸೀಳಿ ಬಿಸುಟೆನು ಶಿಲ್ಪದಲಿ ಖಳರ (ಅರಣ್ಯ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅದು ಘೋರತರವಾದ ಮಾಯೆ. ಇತರರಿಗೆ ಅದರ ಪ್ರತೀಕಾರ ತಿಳಿಯದು. ಶಿವನ ಮಹಾ ಕೃಪೆಯಿಂದ ನನಗೆ ಅದರ ರಹಸ್ಯವು ಸಂಪೂರ್ಣವಾಗಿ ತಿಳಿಯಿತು. ರಾಕ್ಷಸರು ಯಾವ ರೀತಿಯಿಂದ ಹೇಗೆ ಮಾಯೆಯನ್ನು ಮಾಡಿದ್ದರೋ, ಅದರ ವಿವರವನ್ನು ಭೇದಿಸಿ ಅವರ ಮಾಯಾ ಶಿಲ್ಪವನ್ನು ಸೀಳಿ ಹಾಕಿದೆನು.

ಅರ್ಥ:
ಘೋರ: ಉಗ್ರವಾದುದು; ಬಳಿಕ: ನಂತರ; ಪ್ರತಿಕಾರ: ಮಾಡಿದು ದಕ್ಕೆ ಪ್ರತಿಯಾಗಿ ಮಾಡುವುದು; ಇಂದುಮೌಳಿ: ಶಿವ; ಸಾರ: ಶ್ರೇಷ್ಠ, ತಿರುಳು; ಕೃಪೆ: ಕರುಣೆ; ರಹಸ್ಯ: ಗುಟ್ಟು; ಸಾಂಗ: ಸಮಗ್ರತೆ; ಬಾರಿಸು: ನಿವಾರಿಸು, ಹೊಡೆ; ಅಂಗ: ಶರೀರದ ಭಾಗ; ಮಾಯ: ಇಂದ್ರಜಾಲ; ರಚನೆ: ನಿರ್ಮಾಣ; ವಿವಿಧ: ಹಲವಾರು; ವಿವರಣ:ವರ್ಣಿಸುವುದು; ಆರುಭಟೆ: ಜೋರಾಗಿ ಕೂಗು; ಸೀಳು: ಕಡಿ; ಬಿಸುಟು: ಹೊರಹಾಕು; ಶಿಲ್ಪ: ಕುಶಲ ವಿದ್ಯೆ; ಖಳ: ದುಷ್ಟ;

ಪದವಿಂಗಡಣೆ:
ಘೋರತರವದು +ಬಳಿಕ +ದುಷ್ಪ್ರತಿ
ಕಾರವ್+ಇತರರಿಗ್+ಇಂದುಮೌಳಿಯ
ಸಾರತರ +ಕೃಪೆಯಾಯ್ತಲೇ +ಸರಹಸ್ಯ+ಸಾಂಗದಲಿ
ಬಾರಿಸಿದುದಾವ್+ಅಂಗದಲಿ +ಮಾ
ಯಾ+ರಚನೆ+ಆ +ವಿವಿಧ+ ವಿವರಣದ್
ಆರುಭಟೆಯಲಿ +ಸೀಳಿ +ಬಿಸುಟೆನು+ ಶಿಲ್ಪದಲಿ +ಖಳರ

ಅಚ್ಚರಿ:
(೧) ಶಿವನ ಕೃಪೆಯ ಬಗ್ಗೆ ತಿಳಿಸುವ ಪರಿ – ಇಂದುಮೌಳಿಯ ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ