ಪದ್ಯ ೬: ಅರ್ಜುನನ ಮೇಲೆ ಯಾರು ಆಕ್ರಮಣ ಮಾಡಿದರು?

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು (ಗದಾ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅರ್ಜುನನ ಮೇಲೆ ಆಕ್ರಮಣ ಮಾಡಿತು. ರಥಗಳು ವೇಗದಿಂದ ನುಗ್ಗಿದವು. ಗಜಘಟೆಗಳು ಮುಂದಾದವು. ಜೋಡಿ ಬೆರಳುಗಳಿಂದ ಬಾಣವನ್ನೆಳೆದು ಬಿಲ್ಲುಗಾರರು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟು ಅವನ ಆಕ್ರಮಣವನ್ನು ತಡೆದರು. ಈಟಿಯನ್ನು ಹಿಡಿದವರು ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು, ಮುತ್ತು; ದುವ್ವಾಳಿ: ತೀವ್ರಗತಿ, ಓಟ; ರಥ: ಬಂಡಿ; ನಿವಹ: ಗುಂಪು; ಬಿಡು: ತೊರೆ; ಕುದುರೆ: ಅಶ್ವ; ಸೂಠಿ: ವೇಗ; ಅವಗಡಿಸು: ಕಡೆಗಣಿಸು, ಸೋಲಿಸು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡ ಆನೆ; ಸಂದಣಿಸು: ಗುಂಪುಗೂಡು; ಸವಡಿ: ಜೊತೆ, ಜೋಡಿ; ಸೇದು: ಸೆಳೆ, ದೋಚು; ಅಂಬು: ಬಾಣ; ತವಕ: ಬಯಕೆ, ಆತುರ; ತರುಬು: ತಡೆ, ನಿಲ್ಲಿಸು; ಬಲುಬಿಲ್ಲವರು: ಶ್ರೇಷ್ಠನಾದ ಬಿಲ್ಲುಗಾರ; ಮೊನೆ: ತುದಿ; ಮೋಹಿತ: ಆಕರ್ಷ್ತಿಸಲ್ಪಟ್ಟ; ಮಿಕ್ಕ: ಉಳಿದ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಕವಿದುದಿದು +ದುವ್ವಾಳಿಸುತ +ರಥ
ನಿವಹ +ಬಿಟ್ಟವು +ಕುದುರೆ +ಸೂಠಿಯಲ್
ಅವಗಡಿಸಿ +ತೂಳಿದವು +ಹೇರಾನೆಗಳು +ಸಂದಣಿಸಿ
ಸವಡಿ+ಬೆರಳಲಿ +ಸೇದುವ್+ಅಂಬಿನ
ತವಕಿಗರು +ತರುಬಿದರು +ಬಲುಬಿ
ಲ್ಲವರು +ಮೊನೆ+ಮುಂತಾಗಿ +ಮೋಹಿತು +ಮಿಕ್ಕ +ಸಬಳಿಗರು

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊನೆ ಮುಂತಾಗಿ ಮೋಹಿತು ಮಿಕ್ಕ
(೨) ಬಿಲ್ಲುಗಾರರನ್ನು ವಿವರಿಸುವ ಪರಿ – ಸವಡಿವೆರಳಲಿ ಸೇದುವಂಬಿನ ತವಕಿಗರು ತರುಬಿದರು

ಪದ್ಯ ೭೩: ಅರ್ಜುನನು ಕೌರವನಿಗೆ ಹೇಗೆ ಉತ್ತರಿಸಿದನು?

ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರತೆಗಳ ಕಾಣಿಸಿದ (ವಿರಾಟ ಪರ್ವ, ೯ ಸಂಧಿ, ೭೩ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನಿಗೆ ಉತ್ತರಿಸುತ್ತಾ, ನಿಜ ನೀನು ಗರುಡನೇ, ಆದರೆ ನಿನ್ನ ರೆಕ್ಕೆಗಳನ್ನು ಮುರಿದು ನಿನ್ನ ಹೆಡತಲೆಯ ಮೇಲೇರಿ ನಿನ್ನ ಬೆನ್ನೆಲುಬು ಮುರಿಯುವಂತೆ ಸವಾರಿ ಮಾಡುವ ವಿಷ್ಣು ನಾನು, ಇದು ನಿನಗೆ ತಿಳಿದಿಲ್ಲವೇ? ಸುಧಾರಿಸಿಕೋ, ಸ್ವಲ್ಪ ಶೌರ್ಯವನ್ನು ತಂದುಕೋ ಎಂದು ಗರ್ಜಿಸಿ ಎರಡು ಬಾಣಗಳನ್ನು ಬಿಡಲು ಕೌರವನ ಎದೆ ವಿರಿದು ರಕ್ತ ಸುರಿಯಿತು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ಪಕ್ಕ: ರೆಕ್ಕೆ, ಗರಿ; ಮುರಿ: ಸೀಳು; ಹೆಡತಲೆ: ಹಿಂದಲೆ; ಅಡರು: ಮೇಲಕ್ಕೆ ಹತ್ತು; ಬೆನ್ನು: ಹಿಂಭಾಗ; ಎಲು: ಎಲುಬು, ಮೂಳೆ; ಮುರಿ: ಸೀಳು; ದುವ್ವಾಳಿ: ತೀವ್ರಗತಿ, ಓಟ; ಮುರರಿಪು: ಮುರನೆಂಬ ರಾಕ್ಷಸನ ವೈರಿ (ವಿಷ್ಣು); ಅರಿ: ತಿಳಿ; ತರಹರಿಸು: ತಡಮಾಡು, ಕಳವಳ; ಕಲಿ: ಶೂರ; ಅಬ್ಬರ: ಗರ್ಜನೆ, ಆರ್ಭಟ; ಎದೆ: ವಕ್ಷಸ್ಥಳ; ಉಗುಳು: ಹೊರಹಾಕು; ಬಾಣ: ಅಂಬು, ಸರಳು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಒರತೆ: ಚಿಲುಮೆ; ಕಾಣಿಸು: ತೋರು;

ಪದವಿಂಗಡಣೆ:
ಗರುಡ +ನೀನಹೆ+ ನಿನ್ನ +ಪಕ್ಕವ
ಮುರಿದು +ಹೆಡತಲೆಗ್+ಅಡರಿ +ಬೆನ್ನಲು
ಮುರಿಯೆ +ದುವ್ವಾಳಿಸುವ +ಮುರರಿಪುವ್+ಎನ್ನ+ ನೀನರಿಯ
ತರಹರಿಸಿ+ ಕಲಿಯಾಗು+ಎಂದ್
ಅಬ್ಬರಿಸಿ +ಕೌರವನ್+ಎದೆಯನ್+ಉಗುಳಿದನ್
ಎರಡು +ಬಾಣದೊಳ್+ಅರುಣ +ಜಲದ್+ಒರತೆಗಳ+ ಕಾಣಿಸಿದ

ಅಚ್ಚರಿ:
(೧) ಅರ್ಜುನನು ತನ್ನ ಪೌರುಷವನ್ನು ಹೇಳುವ ಪರಿ – ನಿನ್ನ ಪಕ್ಕವ ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ

ಪದ್ಯ ೫೫: ಸುಶರ್ಮನ ಸೇನೆಯು ಹೇಗೆ ಭಂಗಹೊಂದಿತು?

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲುದಳ ಕವಿದುದು ಮಹಾರಥ
ರೇಳುಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು (ವಿರಾಟ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಮುಂಭಾಗದ ಸೈನ್ಯವನ್ನು ನಾಶವಾಗಿ, ನಾಯಕರು ಯುದ್ಧಕ್ಕಿಳಿದರು. ರಥಗಳು ಯುದ್ಧಕ್ಕೆ ನುಗ್ಗಿದವು. ಏಳು ಸಾವಿರ ಮಹಾ ಪರಾಕ್ರಮಶಾಲಿಗಳು ಕಾಳಗದಲ್ಲಿ ಹಿಮ್ಮೆಟ್ಟಲು ಸುಶರ್ಮನ ಸೈನ್ಯವು ಭಂಗ ಹೊಂದಿತು.

ಅರ್ಥ:
ಚೂಳಿಕೆ: ಮುಡಿಗೆ ಸಿಕ್ಕಿಸುವ ಹೂವಿನ ಅಥವ ಮುತ್ತಿನ ಗೊಂಡೆ; ಬಲ: ಶಕ್ತಿ; ಮುರಿ: ಸೀಳು; ದೊರೆ: ರಾಜ; ಬಿದ್ದು: ಬೀಳು, ಆಕ್ರಮಣ ಮಾಡು; ಬವರ:ಕಾಳಗ, ಯುದ್ಧ; ಬಳಿಕ: ನಂತರ; ಕೆಚ್ಚು: ಧೈರ್ಯ, ಸಾಹಸ; ಹೊಕ್ಕು: ಸೇರು, ಓತ; ದುವ್ವಾಳಿ:ತೀವ್ರಗತಿ, ವೇಗವಾದ ನಡೆ, ಓಟ; ನಿಜ: ತನ್ನ; ರಥ: ಬಂಡಿ; ಮೇಲು: ಅಗ್ರಭಾಗ; ಕವಿ: ಮುಸುಕು; ಮಹಾ: ಶ್ರೇಷ್ಠ; ಭೂಪ: ರಾಜ; ಕಾಳಗ: ಯುದ್ಧ; ತೆಗೆ: ಹೊರತರು; ಸೇನೆ: ಸೈನ್ಯ; ಮುರಿ:ಬಗ್ಗು;

ಪದವಿಂಗಡಣೆ:
ಚೂಳಿಕೆಯ +ಬಲ +ಮುರಿದು +ದೊರೆಗಳ
ಮೇಲೆ +ಬಿದ್ದುದು +ಬವರ +ಬಳಿ+ಕೆ
ಚ್ಚಾಳು+ತನದಲಿ+ ಹೊಕ್ಕು +ದುವ್ವಾಳಿಸುವ +ನಿಜರಥದ
ಮೇಲುದಳ+ ಕವಿದುದು +ಮಹಾರಥರ್
ಏಳುಸಾವಿರ+ ಮತ್ಸ್ಯಭೂಪನ
ಕಾಳಗಕೆ+ ತೆಗೆದರು+ ತ್ರಿಗರ್ತರ +ಸೇನೆ +ಮುರಿವಡೆದು

ಅಚ್ಚರಿ:
(೧) ‘ಬ’ ಕಾರದ ಜೋಡಿ ಪದ – ಬಿದ್ದುದು ಬವರ ಬಳಿಕೆ
(೨) ನಿಜರಥ, ಮಹಾರಥ – ರಥ ಪದದ ಬಳಕೆ