ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೨೧: ಉತ್ತರನು ಕತ್ತಿಯನು ತೋರಿಸುತ್ತಾ ಏನೆಂದು ಜಂಬ ಕೊಚ್ಚಿಕೊಂಡನು?

ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರ್ಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕವನಾವನೆಂದನು ಖಂಡೆಯವ ಜಡಿದು (ವಿರಾಟ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ರಾಜರಾದವರು ಬಂದು ಗೋವುಗಳನ್ನು ಹಿಡಿಯುವುದೇ? ಜಗತ್ತಿನಲ್ಲಿ ಕೀಳು ಕೃತ್ಯದ ಜನರು, ಅಧಮರ ಕೃತ್ಯಗಳನ್ನು (ಕೆಟ್ಟಯೋಚನೆಯುಳ್ಳ, ಹೆಂಗಸರ ಸೌಂದರ್ಯವನ್ನು ನೋಡುವ) ಕೌರವನು ರೂಢಿಸಿಕೊಂಡನೇ? ಇದರಿಂದ ಅವನಿಗೆ ದುಷ್ಕೃತ್ಯ ಕಟ್ಟಿಟ್ಟ ಬುತ್ತಿ. ನಾನು ಸುಮ್ಮನೆ ಬಿಡುವನೇ, ನನ್ನೊಡನೆ ಯುದ್ಧ ಮಾಡಿ ಬದುಕಿ ಉಳಿಯುವವರಾರು? ಎಂದು ಕತ್ತಿಯನ್ನು ಝಳಪಿಸಿ ಉತ್ತರನು ಗರ್ಜಿಸಿದನು.

ಅರ್ಥ:
ಪೊಡವಿ: ಪೃಥ್ವಿ, ಭೂಮಿ; ಪತಿ: ಒಡೆಯ; ಬಂದು: ಆಗಮಿಸಿ; ತುರು: ಗೋವು; ಹಿಡಿ: ಬಂಧಿಸು; ಲೋಕ: ಜಗತ್ತು; ಅಧಮ: ಕೀಳು, ನೀಚ; ಬಡ: ದೀನ; ಮನ್ನೆಯ: ಗೌರವಕ್ಕೆ ಪಾತ್ರವಾದವ; ಮೈಸಿರಿ: ದೇಹ ಸೌಂದರ್ಯ; ಕಡೆ: ಕೊನೆ; ದುರ್ಯಶ: ಅಪಕೀರ್ತಿ; ಉಳಿವುದು: ಇರುವುದು; ಗೋ: ಗೋವು; ಧನ: ಐಶ್ವರ್ಯ; ತೊಡಕು: ಸಿಕ್ಕು, ಗೋಜು, ಗೊಂದಲ; ಬದುಕು: ಜೀವಿಸು; ಖಂಡೆಯ: ಕತ್ತಿ, ಖಡ್ಗ;

ಪದವಿಂಗಡಣೆ:
ಪೊಡವಿ+ಪತಿಗಳು+ ಬಂದು +ತುರುಗಳ
ಹಿಡಿವರೇ +ಲೋಕದಲಿ +ಅಧಮರ
ಬಡಮನದ +ಮನ್ನೆಯರ +ಮೈಸಿರಿ +ಕೌರವನೊಳಾಯ್ತು
ಕಡೆಗೆ +ದುರ್ಯಶ+ವುಳಿವುದ್+ಅಲ್ಲದೆ
ಬಿಡುವೆನೇ +ಗೋಧನವನ್+ಎನ್ನೊಳು
ತೊಡಕಿ +ಬದುಕವನಾವನ್+ಎಂದನು +ಖಂಡೆಯವ +ಜಡಿದು

ಅಚ್ಚರಿ:
(೧) ರಾಜ ಎಂದು ಹೇಳಲು ಪೊಡವಿಪತಿ ಎಂಬ ಪದದ ಪ್ರಯೋಗ