ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ (ಗದಾ ಪರ್ವ, ೧೩ ಸಂಧಿ, ೬ ಪದ್ಯ)
ತಾತ್ಪರ್ಯ:
ಪಟ್ಟಾಭಿಷೇಕದ ಮಹೊತ್ಸವದಲ್ಲಿ ಬಾಷ್ಕಳನೆಂಬ ದುರಾತ್ಮನ ಕುಯುಕ್ತಿ ಯುಕ್ತವಾದ ವಾದವನ್ನು ಕೇಳಿ ಮುನಿಗಳು ಅದರಿಂದುಂಟಾಗುವ ವಿಷಾದದ ಅಗ್ನಿಯಿಂದ ಅವನ ಪ್ರಾಣವನ್ನು ಹಾರಿಸಿ ಸುಟ್ಟುಹಾಕಿದರು. ಆ ಬಳಿಕ ಶ್ರೀಕೃಷ್ಣನು ಧರ್ಮಜನನ್ನು ಸಂತೈಸಿದನು.
ಅರ್ಥ:
ಪಟ್ಟಾಭಿಷೇಕ: ವಿಧ್ಯುಕ್ತವಾಗಿ ಪವಿತ್ರ ಜಲಗಳಿಂದ ಅಭಿಷೇಕ ಮಾಡುವಿಕೆ, ಸಿಂಹಾಸನಾರೋಹಣ ಸಮಾರಂಭ; ದುರಾತ್ಮ: ದುಷ್ಟ; ಪರಿವಾದ: ನಿಂದೆ, ತೆಗೆಳಿಕೆ; ಮುನಿ: ಋಷಿ; ನಿಕರ: ಗುಂಪು; ಕೇಳು: ಆಲಿಸು; ಖತಿ: ಕೋಪ; ಭಾರ: ಹೊರೆ; ಭೇದ: ಮುರಿಯುವುದು; ಅಸುರ: ರಾಕ್ಷಸ; ವಿಷಾದ: ನಿರುತ್ಸಾಹ; ವಹ್ನಿ: ಬೆಂಕಿ, ಅಗ್ನಿ; ಅರುಹು: ತಿಳಿಸು; ಆದರ: ಗೌರವ; ಸಂತೈಸು: ಸಾಂತ್ವನಗೊಳಿಸು; ಮುರವೈರಿ: ಕೃಷ್ಣ;
ಪದವಿಂಗಡಣೆ:
ಆದುದಾ +ಪಟ್ಟಾಭಿಷೇಕದೊಳ್
ಆ+ ದುರಾತ್ಮಕ +ಬಾಷ್ಕಳನ +ಪರಿ
ವಾದವನು +ಮುನಿ+ನಿಕರ+ ಕೇಳಿದು +ಖತಿಯ +ಭಾರದಲಿ
ಭೇದಿಸಿದರ್+ಅವನ್+ಅಸುರನೆಂದು +ವಿ
ಷಾದ+ವಹ್ನಿಯಲ್+ಉರುಹಿದರು +ಬಳಿಕ್
ಆದರಿಸಿ +ಧರ್ಮಜನ +ಸಂತೈಸಿದನು +ಮುರವೈರಿ
ಅಚ್ಚರಿ:
(೧) ರೂಪಕದ ಪ್ರಯೋಗ – ವಿಷಾದವಹ್ನಿಯಲುರುಹಿದರು
(೨) ಒಂದೇ ಪದವಾಗಿ ಬಳಕೆ – ಭೇದಿಸಿದರವನಸುರನೆಂದು, ವಿಷಾದವಹ್ನಿಯಲುರುಹಿದರು