ಅರಸನುಪ್ಪವಡಿಸಿದ ನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನ ಕುಂತ ವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಧೌಮ್ಯ (ಸಭಾ ಪರ್ವ, ೧೪ ಸಂಧಿ, ೧೭ ಪದ್ಯ)
ತಾತ್ಪರ್ಯ:
ಯುಧಿಷ್ಠಿರನು ಆ ಕನಸನ್ನು ನೋಡಿ ಮೇಲೆದ್ದನು. ನಿತ್ಯ ಕರ್ಮಗಳನ್ನು ಮುಗಿಸಿದನು. ಅವನ ಮನಸ್ಸು ಕದಡಿಹೋಗಿತ್ತು. ಅವನು ಧೌಮ್ನ್ಯನನ್ನು ಬರೆಮಾಡಿಕೊಂಡು ತಾನು ಕಂಡ ಕನಸಿನ ಬಗ್ಗೆ ವಿವರಿಸಿದನು. ಇದನ್ನು ಕೇಳಿದ ದೌಮ್ಯನು ಈ ಕನಸಿನ ದುಷ್ಫಲಗಳು ದುಸ್ತರವಾಗಿದೆ, ಊರಿಗೆ ಹಿಂದಿರುಗಿದ ಮೇಲೆ ಶಾಂತಿಕರ್ಮವನ್ನು ಮಾಡೋಣ ಹೆದರಬೇಡಿ ಎಂದು ಹೇಳಿದನು.
ಅರ್ಥ:
ಅರಸ: ರಾಜ; ಉಪ್ಪವಡಿಸು: ಮೇಲೇಳು; ಅವನೀಶ್ವರ: ರಾಜ; ಅವನೀ: ಭೂಮಿ; ಈಶ್ವರ: ಒಡೆಯ; ವಿಹಿತ: ಔಚಿತ್ಯಪೂರ್ಣ, ಹೊಂದಿಸಿದ; ಸತ್ಕ್ರಿಯೆ: ಕಾರ್ಯ, ಕರ್ಮ; ವಿಸ್ತರಿಸು: ಹಬ್ಬು, ಹರಡು; ದುಃಸ್ವಪ್ನ: ಕೆಟ್ಟ ಕನಸು; ಕುಂತ:ಈಟಿ, ಭರ್ಜಿ; ವಿಭಿನ್ನ: ಒಡೆದ, ಛಿದ್ರಗೊಳಿಸುವ; ಚೀತನ: ಮನಸ್ಸು; ಕರೆಸು: ಬರೆಮಾಡು; ಅರುಹು: ಹೇಳು; ಅತಿ: ಬಹಳ; ದುಸ್ತರ: ಪರಿಹರಿಸಲಾಗದ; ಕನಸು: ಸ್ವಪ್ನ; ಶಾಂತಿ: ನೆಮ್ಮದಿ, ಚಿತ್ತಸ್ವಾಸ್ಥ್ಯ; ಕರ್ಮ: ಕೆಲಸ; ಪುರ: ಊರು; ವಿರಚಿಸು: ಕಟ್ಟು, ನಿರ್ಮಿಸು; ಅಂಜು: ಹೆದರು;
ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್ + ಅವನೀ
ಶ್ವರ +ವಿಹಿತ +ಸತ್ಕ್ರಿಯೆಗಳನು +ವಿ
ಸ್ತರಿಸಿದನು +ದುಃಸ್ವಪ್ನ +ಕುಂತ +ವಿಭಿನ್ನ+ಚೇತನನು
ಕರೆಸಿ+ ಧೌಮ್ಯನಿಗ್+ಅರುಹಲ್+ಅತಿ+ ದು
ಸ್ತರದ+ ಕನಸಿದು +ಶಾಂತಿ +ಕರ್ಮವ
ಪುರದೊಳಗೆ+ ವಿರಚಿಸುವೆನ್+ಅಂಜದಿರೆಂದನಾ+ ಧೌಮ್ಯ
ಅಚ್ಚರಿ:
(೧) ಅರಸ, ಅವನೀಶ್ವರ – ಸಮನಾರ್ಥಕ ಪದ, ೧ ಸಾಲಿನ ಮೊದಲ ಹಾಗು ಕೊನೆ ಪದ