ಪದ್ಯ ೨೪: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೫?

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ತಂದೆ ಒಡೆಯ ದುರ್ಯೋಧನನೇ, ಪಾಂಡವರೈವರೂ ಬದುಕಿ ಉಳಿದರು, ನಿನ್ನೊಬ್ಬನನ್ನು ಬಿಟ್ಟು ನಿನ್ನ ತಮ್ಮಂದಿರೆಲ್ಲರೂ ಮಡಿದರು. ಅವರ ಐವರು ಮಕ್ಕಳೂ ಸುಖವಾಗಿ ಜೀವಿಸಿದ್ದಾರೆ, ನಿನ್ನ ಮಕ್ಕಳೆಲ್ಲರನ್ನೂ ಯಮನು ಸಿವುಡು ಕಟ್ಟಿ ಎಳೆದೊಯ್ದ. ಅಪ್ಪಾ ದುರ್ಯೋಧನ ದೈವವನ್ನು ವಿರೋಧಿಸಿ ಈ ದುಃಸ್ಥಿತಿಗೆ ಬಂದೆ ಎಂದು ಸಂಜಯನು ಹೇಳಿದನು.

ಅರ್ಥ:
ಬದುಕು: ಜೀವಿಸು; ಉಳಿ: ಬದುಕಿರು; ಸವರು: ನಾಶ; ಕುಮಾರ: ಮಕ್ಕಳು; ಸೌಖ್ಯ: ಸುಖ, ನೆಮ್ಮದಿ; ಜವ: ಯಮ; ಸಿವಡಿ: ಒಂದು ಅಳತೆ, ಕಿರ್ದಿ; ಹತ್ತು: ಏರು; ನೂರು: ಶತ; ದೈವ: ಭಗವಂತ; ಅವಗಡಿಸು: ಕಡೆಗಣಿಸು; ದುಃಸ್ಥಿತಿ: ಕೆಟ್ಟ ಅವಸ್ಥೆ;

ಪದವಿಂಗಡಣೆ:
ಅವರು +ಬದುಕಿದರ್+ಐವರೂ +ನಿ
ನ್ನವರೊಳಗೆ+ ನೀನುಳಿಯೆ +ನೂರ್ವರು
ಸವರಿತ್+ಅವರ್+ಐವರು+ ಕುಮಾರರು+ ಸೌಖ್ಯ +ಜೀವಿಗಳು
ಜವನ+ಸಿವಡಿಗೆ +ಹತ್ತಿದರು +ನಿ
ನ್ನವರು +ಮಕ್ಕಳು +ನೂರು +ದೈವವನ್
ಅವಗಡಿಸಿ +ದುಃಸ್ಥಿತಿಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ದುಃಸ್ಥಿತಿಗೆ ಕಾರಣ – ದೈವವನವಗಡಿಸಿ ದುಃಸ್ಥಿತಿಗೆ ಬಂದೈ

ಪದ್ಯ ೩೦:ದುರ್ಯೋಧನನನ್ನು ಪಾಳೆಯಕ್ಕೆ ಹೇಗೆ ತಂದರು?

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ (ಕರ್ಣ ಪರ್ವ, ೨೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ನೋಡಿ ದುಃಖಸಾಗರದಲ್ಲಿ ಮೂರ್ಛಿತನಾಗಿದ್ದ ದುರ್ಯೋಧನನನ್ನು ಪಲ್ಲಕ್ಕಿಯಲ್ಲಿ ಅವ್ಯವಸ್ಥೆಯಲ್ಲಿ ಕೂಡಿದ್ದ ಕೌರವರ ಪಾಳೆಯಕ್ಕೆ ತಂದರು, ಸೂರ್ಯನು ತನ್ನ ಮಗನ ಸಾವನ್ನು ವೀಕ್ಷಿಸಿ ದುಃಖಭರಿತನಾಗಿ ನನ್ನ ಮಗನು ದೇಹವನ್ನು ಬಿಟ್ಟನೇ ಎಂದು ಚಿಂತಿಸುತ್ತಾ ಸಮುದ್ರದಲ್ಲಿ ಧುಮುಕಲು ಹೋದನು.

ಅರ್ಥ:
ಪರವಶ:ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ; ರಾಯ: ರಾಜ; ತೆತ್ತು:ಸಂಬಂಧಿಸಿರು; ದಂಡಿಗೆ: ಪಲ್ಲಕ್ಕಿ; ಎತ್ತು: ಮೇಲಕ್ಕೆತ್ತು; ತಂದರು: ಬರೆಮಾಡು; ಪಾಳೆ: ಬಿಡಾರ; ದುಃಸ್ಥಿತಿ: ಅವ್ಯವಸ್ಥೆ; ಮೇಳಯ: ಗುಂಪು; ತೆತ್ತು: ಬಿಡು; ಮಗ: ಸುತ; ಅಸು: ಪ್ರಾಣ; ಅಕಟ: ಅಯ್ಯೋ; ಚಿಂತೆ; ಯೋಚನೆ; ಕಡಲು: ಸಾಗರ; ಹಾಯ್ದು: ಜಾರು, ಲಂಘಿಸು; ಬಿಸುಟ: ಹೊರಹಾಕು; ಅಂಬುಜ: ಕಮಲ; ಅಂಬುಜಮಿತ್ರ: ಸೂರ್ಯ; ಅಂಬರ: ಗಗನ;

ಪದವಿಂಗಡಣೆ:
ಇತ್ತ +ಪರವಶವಾದ +ರಾಯನ
ತೆತ್ತಿಗರು+ ದಂಡಿಗೆಯೊಳ್+ಈತನನ್
ಎತ್ತಿ +ತಂದರು +ಪಾಳೆಯಕೆ +ದುಃಸ್ಥಿತಿಯ +ಮೇಳೆಯಕೆ
ತೆತ್ತನೇ+ ಮಗನ್+ಅಸುವನ್+ಅಕಟ+ ಎ
ನುತ್ತ +ಚಿಂತಾರಾಗದಲಿ +ಕಡ
ಲತ್ತ +ಹಾಯ್ದನು +ಬಿಸುಟನ್+ಅಂಬುಜಮಿತ್ರನ್+ಅಂಬರವ

ಅಚ್ಚರಿ:
(೧) ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ಸೂರ್ಯಾಸ್ತವಾಯಿತು ಎಂದು ಹೇಳಲು – ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ
(೩) ಕೌರವರ ಪಾಳೆಯವನ್ನು ವಿವರಿಸುವ ಪದ – ದುಃಸ್ಥಿತಿಯ ಮೇಳೆಯಕೆ
(೪) ಚಿಂತೆಯಲ್ಲೂ ಸಂಗೀತವನ್ನು ಹುಡುಕುವ ಕವಿಯ ಪದ ಪ್ರಯೋಗ – ಚಿಂತಾರಾಗ