ಪದ್ಯ ೨೬: ಅರ್ಜುನನ ಮೇಲೆ ಯಾವ ದೂರನ್ನು ಹೇಳಿದರು?

ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳನು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು (ಅರಣ್ಯ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೈತ್ಯರ ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆಯೊಳಕ್ಕೆ ಹೋಗುವಂತೆ ಮಾಡಿದೆನು. ನೊಂದ ಅವರು ನಿವಾತಕವಚರಿಗೆ ನನ್ನ ಮೇಲೆ ದೂರು ಹೇಳಿದರು. ಒಡೆಯ, ಯುದ್ಧಕ್ಕೆ ಬಂದವನು ದೇವತೆಗಳಂತೆ ತೋರುವುದಿಲ್ಲ, ಅವನು ವೀರ, ಯುದ್ಧ ವ್ಯಾಕರಣದ ಪಂಡಿತ ಎಂದು ವರ್ಣಿಸಿದರು.

ಅರ್ಥ:
ನೂಕು: ತಳ್ಳು; ದೈತ್ಯ: ರಾಕ್ಷಸ; ಚೂಣಿ: ಮುಂಭಾಗ; ಮುರಿ: ಸೀಳು; ಔಕು: ಒತ್ತು; ದುರ್ಗ: ಕೋಟೆ; ಹೊಗಿಸು: ಹೋಗು, ತೆರಳು; ವ್ಯಾಕುಲ: ದುಃಖ, ವ್ಯಥೆ; ಸೂಸು: ಎರಚು, ಚಲ್ಲು; ಭಯ: ಅಂಜಿಕೆ; ಆಕೆವಾಳ: ಪರಾಕ್ರಮಿ; ಜೀಯ: ಒಡೆಯ; ದಿವೌಕ: ದೇವತೆ; ಪರಿ: ರೀತಿ; ಯುದ್ಧ: ಕಾಳಗ; ವ್ಯಾಕರಣ: ನಿಯಮ; ಪಾಂಡಿತ್ಯ: ತಿಳಿದವ, ವಿದ್ವತ್ತು; ದೂರು: ಆರೋಪ ಮಾಡು, ಆಕ್ಷೇಪಿಸು;

ಪದವಿಂಗಡಣೆ:
ನೂಕಿ +ದೈತ್ಯರ +ಚೂಣಿಯನು +ಮುರಿದ್
ಔಕಿ+ ದುರ್ಗವ+ ಹೊಗಿಸಿದೆನು +ಸ
ವ್ಯಾಕುಲರು +ಸೂಸಿದರು+ ಭಯವ +ನಿವಾತಕವಚರಿಗೆ
ಆಕೆವಾಳನು+ ಜೀಯ +ನಮ್ಮ +ದಿ
ವೌಕಸರ+ ಪರಿಯಲ್ಲ+ ಯುದ್ಧ
ವ್ಯಾಕರಣ+ ಪಾಂಡಿತ್ಯವುಂಟ್+ಎಂದೆನ್ನ+ ದೂರಿದರು

ಅಚ್ಚರಿ:
(೧) ಸುರರಿಗೆ ದಿವೌಕಸರ ಪದದ ಬಳಕೆ
(೨) ಪರಾಕ್ರಮಿ ಎಂದು ಹೇಳುವ ಪರಿ – ದಿವೌಕಸರ ಪರಿಯಲ್ಲ ಯುದ್ಧವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು

ಪದ್ಯ ೮೭: ದೇವತೆಗಳು ಏಕೆ ಗದ್ದಲ ಮಾಡಿದರು?

ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪಪುಣ್ಯರ
ನೇಕೆ ಹೊಗಿಸಿದೆ ಬಹಳದಾನ ತಪೋ ವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ (ಅರಣ್ಯ ಪರ್ವ, ೮ ಸಂಧಿ, ೮೭ ಪದ್ಯ)

ತಾತ್ಪರ್ಯ:
ಬಾಗಿಲನ್ನು ಮುಚ್ಚು, ಕೆಲಸಕ್ಕೆ ಬಾರದ ಸ್ವರ್ಗವಾಸಿಗಳನ್ನು ನಿಲ್ಲಿಸು, ಅಲ್ಪ ಪುಣ್ಯದಿಂದ ಸ್ವರ್ಗವಾಸಿಗಳಾದವರನ್ನು ಇಲ್ಲೇಕೆ ಬಿಟ್ಟುಕೋಂಡಿರಿ? ಇವರು ಹೆಚ್ಚಿನ ದಾನವನ್ನೂ ತಪಸ್ಸನ್ನೂ ಮಾಡದೆ ಇಲ್ಲಿಗೆ ಬಂದವರು. ಓಕುಳಿಯಾಡುವ ನೆವದಿಂದ ಸ್ತ್ರೀಯರನ್ನು ಆಲಿಂಗಿಸುವ ಅತಿ ಆಶೆಯುಳ್ಳವರು, ಈ ಗದ್ದಲದಲ್ಲಿ ನುಗ್ಗಿದರೋ? ಇಂತಹವರೆಲ್ಲಾ ಉತ್ತಮ ಅಪ್ಸರೆಯರನ್ನು ಸೋಕುವುದಾದರೆ ನಮಗೇಕೆ ರಂಭೆ ಮೊದಲಾದವರ ಸಹವಾಸ? ಎಂದು ದೇವತೆಗಳು ಹೇಳಿದರು.

ಅರ್ಥ:
ನೂಕು: ತಳ್ಳು; ಬಾಗಿಲು: ಕದ; ಚಾಚು: ಹರಡು; ಬಣಗು: ಕೀಳು, ಅಲ್ಪ; ದಿವೌಕಸರು: ದೇವತೆಗಳು; ನಿಲಿಸು: ತಡೆ; ಅಲ್ಪ: ಚಿಕ್ಕ, ಕ್ಷುದ್ರ; ಪುಣ್ಯ: ಸದಾಚಾರ; ಹೊಗಿಸು: ಸೇರಿಸು; ಬಹಳ: ತುಂಬ; ದಾನ: ಚತುರೋಪಾಯದಲ್ಲಿ ಓಂದು; ತಪ: ತಪಸ್ಸು, ಜಪ; ವಿವರ್ಜಿತ: ಬಿಟ್ಟ, ತ್ಯಜಿಸಿದ; ಓಕುಳಿ: ಉತ್ಸವ ಸಂದರ್ಭಗಳಲ್ಲಿ ಒಬ್ಬರ ಮೇಲೆ ಒಬ್ಬರು ಎರಚುವ ಬಣ್ಣದ ನೀರು; ನೆವ: ಕಾರಣ; ತೆಕ್ಕೆ: ಅಪ್ಪುಗೆ, ಆಲಿಂಗನ; ಬಾಕುಳಿ: ಹೆಬ್ಬಯಕೆ, ಅತ್ಯಾಸೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಆದಿ: ಮುಂತಾದ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ನೂಕು +ಬಾಗಿಲ +ಚಾಚು +ಬಣಗು +ದಿ
ವೌಕಸರ+ ನಿಲಿಸ್+ಅಲ್ಪ+ಪುಣ್ಯರನ್
ಏಕೆ +ಹೊಗಿಸಿದೆ +ಬಹಳದಾನ+ ತಪೋ +ವಿವರ್ಜಿತರ
ಓಕುಳಿಯ+ ನೆವದಿಂದ +ತೆಕ್ಕೆಯ
ಬಾಕುಳಿಗಳ್+ಉರವಣಿಸಿತೇ+ ತಮ
ಗೇಕೆ +ರಂಭಾದಿಗಳ+ ಸೋಂಕ್+ಎಂದುದು+ ಸುರಸ್ತೋಮ

ಅಚ್ಚರಿ:
(೧) ಸುರ, ದಿವೌಕಸರ – ಸಮನಾರ್ಥಕ ಪದ