ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತಸಿದ್ಧಿ ತನಗೆಂದ (ಕರ್ಣ ಪರ್ವ, ೭ ಸಂಧಿ, ೧೭ ಪದ್ಯ)
ತಾತ್ಪರ್ಯ:
ಮಾವ ಕೇಳು, ದೇವತೆಗಳು ಸೃಷ್ಟಿಕರ್ತ ಬ್ರಹ್ಮನ ಬಳಿ ಹೋಗಿ ಶಿವನ ರಥಕ್ಕೆ ಸಾರಥಿಯಾಗಲು ಬೇಡಿಕೊಂಡು, ರಾಜಕಾರ್ಯವನ್ನು ತಿಳಿಸಿ ಸಾರಥಿಯಾಗಲು ಒಪ್ಪಿಸಿದರು. ಈ ದಿನವು ನೀವು ಕರ್ಣನ ರಥಕ್ಕೆ ಸಾರಥಿಯಾಗಲೊಪ್ಪಿದರೆ ನಮ್ಮ ಅಭಿಮತ ಸಿದ್ಧಿಸುತ್ತದೆ ಎಂದು ದುರ್ಯೋಧನನು ತಿಳಿಸಿದನು.
ಅರ್ಥ:
ಮಾವ: ತಾಯಿಯ ಸಹೋದರ; ಕೇಳು: ಆಲಿಸು; ಬಳಿಕ: ನಂತರ; ಹರಿ:ಗತಿ, ಯೋಚಿಸು; ದೇವಕುಲ: ಸುರರು; ಪರಮೇಷ್ಠಿ: ಬ್ರಹ್ಮ; ಭಾವ: ಅಭಿಪ್ರಾಯ, ಇಂಗಿತ; ಬಿನ್ನೈಸು: ಹೇಳು, ಬೇಡು; ನಿಜ: ದಿಟ; ರಾಜಕಾರಿಯ: ರಾಜಕಾರಣ; ವಿಭು: ಬ್ರಹ್ಮ, ಸರ್ವವ್ಯಾಪಿ; ಒಡಬಡಿಸಿ: ಒಪ್ಪಿಸಿ; ದಿವಿಜಾವಳಿ: ದೇವರ ಗುಂಪು; ಇಂದು: ಇವತ್ತು; ಸಾರಥಿ: ರಥವನ್ನು ಓಡಿಸುವವ; ಅಭಿಮತ: ಅಭಿಪ್ರಾಯ; ಸಿದ್ಧಿ: ಸಾಧಿಸು;
ಪದವಿಂಗಡಣೆ:
ಮಾವ +ಕೇಳೈ +ಬಳಿಕ +ಹರಿದುದು
ದೇವಕುಲ +ಪರಮೇಷ್ಠಿಯಲ್ಲಿಗೆ
ಭಾವವನು +ಬಿನ್ನೈಸಿದರು+ ನಿಜರಾಜ+ಕಾರಿಯದ
ಆ +ವಿಭುವನ್+ಒಡಬಡಿಸಿದರು +ದಿವಿ
ಜಾವಳಿಗಳ್+ಇಂದಿನಲಿ +ಕರ್ಣಗೆ
ನೀವು +ಸಾರಥಿಯಾದಡ್+ಅಭಿಮತಸಿದ್ಧಿ+ ತನಗೆಂದ
ಅಚ್ಚರಿ:
(೧) ದೇವಕುಲ, ದಿವಿಜಾವಳಿ – ಸುರರ ಗುಂಪು ಎಂದು ಹೇಳುವ ಪದಗಳು
(೨) ಪರಮೇಷ್ಠಿ, ವಿಭು – ಬ್ರಹ್ಮನನ್ನು ಕರೆಯಲು ಬಳಸಿದ ಪದ